ಬೆಂಗಳೂರು, ಮೇ. 04 (DaijiworldNews/AK):ಪಾಕ್ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.

ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದಾರೆ. ಈ ಹಿನ್ನೆಲೆ ಪಾಕ್ ಕಲಾವಿದರಿಗೆ ಭಾರತೀಯ ಸಿನಿಮಾಗಳಲ್ಲಿ ನಟಿಸದಂತೆ ನಿಷೇಧಿಸಲಾಗಿದೆ ಅಷ್ಟೇ ಅಲ್ಲದೇ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸಲಾಗಿದೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಕಾಶ್ ರಾಜ್ ಮಾತನಾಡಿ, ಯಾವುದೇ ಪ್ರಚಾರದ ಸಿನಿಮಾ ಆಗಿದ್ದರೂ ಯಾವುದೇ ಸಿನಿಮಾವನ್ನು ನಿಷೇಧಿಸುವುದನ್ನು ನಾನು ವಿರೋಧಿಸುತ್ತೇನೆ. ನಿಷೇಧಿಸುವ ಬಗ್ಗೆ ಜನರೇ ನಿರ್ಧರಿಸಲಿ. ನೀಲಿಚಿತ್ರ ಅಥವಾ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಸಿನಿಮಾ ಅಲ್ಲ ಅಂದ್ಮೇಲೆ ನೀವು ಯಾವುದೇ ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ನಟ ಕೆಂಡಕಾರಿದ್ದಾರೆ.
‘ಅಬೀರ್ ಗುಲಾಲ್’ ಮೇ 9ಕ್ಕೆ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದಕ್ಕೀಗ ಭಾರತದಲ್ಲಿ ಬ್ರೇಕ್ ಬಿದ್ದಿದೆ. ಫವಾದ್ ಖಾನ್ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ವಾಣಿ ಕಪೂರ್ ನಟಿಸಿದ್ದರು.