ಮಂಗಳೂರು, ಮೇ. 17 (DaijiworldNews/TA): ಭಾರತ್ ಮಹಲ್ ನಲ್ಲಿ ಮೇ 17ರಂದು ಕೊಂಕಣಿ ಚಲನಚಿತ್ರ "ಜೇವನ್ " ಬಹಳ ವಿಜೃಂಭಣೆಯಿಂದ ತೆರೆಕಂಡಿತು. ದೀಪ ಬೆಳಗಿಸುವ ಮುಖಾಂತರ ಚಲನಚಿತ್ರಕ್ಕೆ ಚಾಲನೆಯನ್ನು ನೀಡಲಾಯಿತು.









ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈ , ದಾಯ್ಜೀ ವರ್ಲ್ಡ್ ನ ಸ್ಥಾಪಕ ಅಧ್ಯಕ್ಷರಾದ ವಾಲ್ಟರ್ ನಂದಳಿಕೆ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾ ರಿಸ್, ಯೂತ್ ಆಫ್ ಜಿ.ಎಸ್.ಬಿ. ಸ್ಥಾಪಕರಾದ ನರೇಶ ಶೆಣೈ , ರತ್ನಾ'ಸ್ ವೈನ್ ಗೇಟ್ ನ ಮಾಲಕರಾದ ಡಿ. ರಮೇಶ ನಾಯಕ್ ಹಾಗೂ ಸುಚಿತ್ರಾ ನಾಯಕ್ , ದೇವಗಿರಿ ಟೀ ಕಂಪನಿಯ ನಿರ್ದೇಶಕರಾದ ಉಷಾ ನಂದಗೋಪಾಲ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದೇವದಾಸ್ ಪೈ ,ಕೊಂಕಣಿ ನಟರಾದ ದಿನೇಶ್ ಪ್ರಭು, ಸತೀಶ್ ನಾಯಕ್, ಸಬಿತಾ ನಾಯಕ್ ಹಾಗೂ ಸಿನಿಮಾ ನಟರಾದ ಮಂಜು ರೈ ಮುಂತಾದವರು ಪಾಲ್ಗೊಂಡು ದೀಪ ಬೆಳಗಿಸುವ ಮುಖಾಂತರ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾ ರಿಸ್ ಮಾತನಾಡಿ, ಕೊಂಕಣಿ ಸಿನಿಮಾಗಳು ಇತ್ತೀಚೆಗೆ ಬಹಳ ವಿರಳ. ಅಂತಹ ಸಂದರ್ಭದಲ್ಲಿ ನಿರ್ದೇಶಕರಾದ ಕೊರೋಪಾಡಿ ಅಕ್ಷಯ ನಾಯಕ್ ಅವರ ಪ್ರಯತ್ನ ನಿಜವಾಗಿಯೂ ಅಭಿನಂದನೀಯ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವಂತಹ ಕೊಂಕಣಿ ಸಂಸ್ಕೃತಿ ಉಳಿಯಬೇಕಾದರೆ ಭಾಷೆ, ಸಾಹಿತ್ಯ ಹಾಗೂ ಕಲೆ ಅಭಿವೃದ್ಧಿಯಾಗಬೇಕು. ಇಂತಹ ವಿಚಾರಗಳಲ್ಲಿ ಸಿನಿಮಾ ರಂಗವು ಬಹಳ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು. ನಿರ್ದೇಶಕರಾದ ಅಕ್ಷಯ ನಾಯಕ್ ಅವರು ಮಾತನಾಡಿ, ವಾಸ್ತವದಲ್ಲಿ ದಿನನಿತ್ಯ ನಡೆಯುತ್ತಿರುವ ಸಂದರ್ಭಗಳನ್ನು ಅಳವಡಿಸಿಕೊಂಡು ಹಾಸ್ಯ ಪ್ರಧಾನವಾಗಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತಹ ಸುಂದರ ಕಥೆಯನ್ನು ಒಳಗೊಂಡ ಸಿನಿಮಾವನ್ನು ನಿರ್ಮಿಸಿದ್ದೇವೆ. ಎಲ್ಲರೂ ಕುಟುಂಬ ಸಮೇತರಾಗಿ ಬಂದು ಈ ಚಲನಚಿತ್ರವನ್ನು ವೀಕ್ಷಿಸಬೇಕು ಎಂದರು. ಇನ್ನು ಈ ಚಲನಚಿತ್ರವು ಪ್ರತಿ ಶನಿವಾರ ಹಾಗೂ ಭಾನುವಾರ ಭಾರತ್ ಸಿನಿಮಾದ ಎಲ್ಲಾ ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ.. ಚಲನಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಂತೋಷ ಪೈ, ಸತೀಶ್ ಪೈ ,ರಾಧೇಶ್ ಶೆಣೈ ಮುಂತಾದವರು ಅಭಿನಯಿಸಿದ್ದಾರೆ.