ಬೆಂಗಳೂರು, ಜೂ. 03 (DaijiworldNews/AA): ಕರ್ನಾಟಕದಲ್ಲಿ 'ಥಗ್ಲೈಫ್' ಚಿತ್ರ ರಿಲೀಸ್ ಮಾಡುವ ಕುರಿತು ನಟ ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿದ್ದು, ರಾಜ್ಯದಲ್ಲಿ ಥಗ್ ಲೈಫ್ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆಯಾಗಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ, ಜೂನ್ 10ರ ಒಳಗೆ ಕಮಲ್ ಹಾಸನ್ ಫಿಲಂ ಚೇಂಬರ್ ಜೊತೆಯಲ್ಲಿ ಮಾತುಕತೆ ಮಾಡಿಕೊಂಡು ವಿವಾದ ಇತ್ಯರ್ಥ ಮಾಡಿಕೊಳ್ಳಬೇಕು. ಅಲ್ಲಿಯವರೆಗೂ ಕರ್ನಾಟಕದಲ್ಲಿ ಥಗ್ಲೈಫ್ ರಿಲೀಸ್ ಮಾಡಬಾರದು ಎಂದು ಸೂಚಿಸಿದೆ.
ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ. ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದ್ರೆ ಹೇಗೆ? ಕನ್ನಡ ಭಾಷೆ ತಮಿಳಿಂದ ಹುಟ್ಟಿದೆ ಅನ್ನೋಕೆ ಅವರೇನು ಇತಿಹಾಸಕಾರರಾ? ಈ ಹಿಂದೆ ಸಿ.ರಾಜಗೋಪಾಲಾಚಾರಿ ಕೂಡ ಕ್ಷಮೆಯನ್ನು ಕೇಳಿದ್ದರು. ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ, ಈ ರೀತಿ ಹೇಳಿಕೆ ನೀಡಬಾರದು. ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿ ಅಲ್ಲ, ಪಬ್ಲಿಕ್ ಫಿಗರ್. ಅವರು ಮೊದಲು ಕ್ಷಮೆ ಕೇಳಲಿ, ಆಮೇಲೆ ಅರ್ಜಿ ಪರಿಗಣಿಸ್ತೇವೆ ಎಂದು ಹೇಳಿದರು. ಇದಕ್ಕೆ ಕಮಲ್ ಹಾಸನ್ ಪರ ವಕೀಲರು ಪ್ರತಿಕ್ರಿಯೆ ನೀಡಲು ಮಧ್ಯಾಹ್ನ 2.30ರವರೆಗೆ ಸಮಯಾವಕಾಶ ಕೇಳಿದ್ದರು.