ಬೆಂಗಳೂರು, ಸೆ. 10 (DaijiworldNews/AA): ವಂಚನೆ ಆರೋಪ ಪ್ರಕರಣದಲ್ಲಿ ನಟ ಧ್ರುವ ಸರ್ಜಾಗೆ ಬಾಂಬೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ನಟನ ವಿರುದ್ಧ ನ್ಯಾಯಾಲಯದ ಅನುಮತಿಯಿಲ್ಲದೆ ಆರೋಪಪಟ್ಟಿ ಸಲ್ಲಿಸದಂತೆ ಬಾಂಬೆ ಹೈಕೋರ್ಟ್, ಮುಂಬೈ ಪೊಲೀಸರಿಗೆ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ವಿಭಾಗೀಯ ಪೀಠವು, ನ್ಯಾಯಾಲಯದ ಅನುಮತಿಯಿಲ್ಲದೆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸದಂತೆ ನಿರ್ದೇಶನ ನೀಡಿದೆ.
ಜಗ್ಗುದಾದ ಸಿನಿಮಾದ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಧ್ರುವಾ ಸರ್ಜಾ ವಿರುದ್ಧ ಮುಂಬೈನಲ್ಲಿ ಬಹುಕೋಟಿ ವಂಚನೆ ಪ್ರಕರಣವನ್ನು ದಾಖಲಿಸಿದ್ದರು. ಈ ಹಿನ್ನೆಲೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
"ಧ್ರುವ ಸರ್ಜಾಗೆ ನಟಿಸುವುದಕ್ಕಾಗಿ ಮುಂಗಡ ಹಣ ನೀಡಿದ್ದೆ. 3.15 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ, ಸಿನಿಮಾದಲ್ಲಿ ನಟಿಸುವುದಕ್ಕೆ ಸರ್ಜಾ ನಿರಾಕರಿಸಿದ್ದರು. ಮುಂಗಡ ತಗೆದುಕೊಂಡಿರುವ ಹಣವನ್ನು ವಾಪಸ್ಸು ನೀಡುತ್ತಿಲ್ಲ" ಎಂದು ಹೆಗಡೆ ದೂರಿನಲ್ಲಿ ಉಲ್ಲೇಖಿಸಿದ್ದರು.
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಧ್ರುವಾ ಸರ್ಜಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. "ನಾನು ಯಾವುದೇ ಚಿತ್ರದಲ್ಲಿ ಕೆಲಸ ಮಾಡುವ ಒಪ್ಪಂದದಿಂದ ಎಂದಿಗೂ ಹಿಂದೆ ಸರಿದಿಲ್ಲ. ಹೆಗಡೆ ಅವರು ಕೆಲಸ ಮಾಡಲು ಯಾವುದೇ ಕಾರ್ಯಸಾಧ್ಯವಾದ ಸ್ಕ್ರಿಪ್ಟ್ಗಳನ್ನು ನೀಡಲು ವಿಫಲರಾಗಿದ್ದಾರೆ" ಎಂದು ಅವರು ತಿಳಿಸಿದ್ದರು.