ರಾಮನಗರ, ಅ. 08 (DaijiworldNews/AA): ಮಾಲಿನ್ಯ ನಿಯಮ ಉಲ್ಲಂಘಿಸಿದ್ದಕ್ಕೆ ಬಿಗ್ಬಾಸ್ ಮನೆಗೆ ಬೀಗ ಜಡಿದ ಬೆನ್ನಲ್ಲೇ ರಾಮನಗರ ಡಿಸಿ ಕಚೇರಿಗೆ ಜಾಲಿವುಡ್ ಆಡಳಿತ ಮಂಡಳಿ ಭೇಟಿ ನೀಡಿ 15 ದಿನ ಕಾಲಾವಕಾಶ ಕೇಳಿ ಮನವಿ ಸಲ್ಲಿಸಿದೆ.

ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ಬಾಸ್ ಸೀಸನ್ 12ರ ಶೋ ನಡೆಯುತ್ತಿದ್ದು, ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡ್ತಿದ್ದಾರೆ. ಹೀಗೆ ಏಕಾಏಕಿ ಬಂದ್ ಮಾಡಿದರೆ ಕಾರ್ಮಿಕರ ಕೆಲಸಕ್ಕೆ ಕುತ್ತು ಬೀಳಲಿದೆ. ನಮ್ಮಿಂದ ತಪ್ಪಾಗಿದೆ, ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ ಎಂದು ಜಾಲಿವುಡ್ ಆಡಳಿತ ಮಂಡಳಿ ಡಿಸಿ ಬಳಿ ಕೇಳಿಕೊಂಡಿದೆ.
ಸದ್ಯ ಜಾಲಿವುಡ್ ಆಡಳಿತ ಮಂಡಳಿ ರಾಮನಗರ ಡಿಸಿಯೊಂದಿಗೆ ಮಾತುಕತೆ ನಡೆಸುತ್ತಿದೆ. ಮಾತುಕತೆ ಯಶಸ್ವಿಯಾದರೆ ಜಿಲ್ಲಾಧಿಕಾರಿಯವರು ಷರತ್ತು ಬದ್ಧ ಅನುಮತಿ ನೀಡಿದರೆ ಇಂದೇ ಜಾಲಿವುಡ್ ಸ್ಟುಡಿಯೋ ಓಪನ್ ಆಗುವ ಸಾಧ್ಯತೆಯಿದೆ. ಜಿಲ್ಲಾಧಿಕಾರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಕಾರಣ ಅವರಿಗೆ ಷರತ್ತುಗಳನ್ನು ವಿಧಿಸಿ ಬೀಗ ತೆಗೆಸಲು ಅಧಿಕಾರವಿದೆ ಎನ್ನಲಾಗಿದೆ.