ಬೆಂಗಳೂರು, ಫೆ. 22 (DaijiworldNews/TA): ಬಾಲಿವುಡ್ ನಟ ರಣವೀರ್ ಸಿಂಗ್ ದೈವ ನಿಂದನೆ ಸಂಬಂಧಿ ಪ್ರಕರಣದಲ್ಲಿ ಹೈಗ್ರೌಂಡ್ ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿದೆ. ಇದಕ್ಕೂ ಮುಂಚೆ ಪೊಲೀಸ್ ಅಧಿಕಾರಿಗಳು ಎರಡು ನೋಟಿಸ್ ನೀಡಿದ್ದರು, ಆದರೆ ನಟನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಕಾನೂನು ಕ್ರಮವನ್ನು ಮುಂದುವರಿಸಲು ಪೊಲೀಸರು ತಯಾರಾಗಿದ್ದಾರೆ.

ಘಟನೆಯ ಹಿನ್ನೆಲೆ, ರಿಷಬ್ ಶೆಟ್ಟಿ ನಟನೆಯ ಕಾಂತಾರ 2 ಚಿತ್ರ ಕುರಿತಾಗಿ ಗೋವಾ ಫಿಲ್ಮ್ಫೇರ್ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಮಾತನಾಡಿದ ಸಂದರ್ಭದ ಘಟನೆಯಾಗಿದೆ. ದೈವ ಕುರಿತು ಅವಹೇಳನಾತ್ಮಕ ಪದಗಳನ್ನು ಬಳಸಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ವಕೀಲ ಪ್ರಶಾಂತ್ ಅವರ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಯಿತು ಮತ್ತು ಇದಕ್ಕೆ ಈಗಾಗಲೇ 20 ದಿನಗಳಷ್ಟು ಕಾಲ ಕಳೆದಿದೆ.
ಮುಂಬೈನಲ್ಲಿರುವ ರಣವೀರ್ ಸಿಂಗ್ ನಿವಾಸಕ್ಕೆ ಪೊಲೀಸ್ ಅಧಿಕಾರಿಗಳು ನೋಟಿಸ್ ಪಾಸ್ ಮಾಡಿದ್ದು, ವಾಟ್ಸಪ್ ಮೂಲಕ ಸಹ ನೋಟಿಸ್ ಕಳುಹಿಸಲಾಗಿದೆ. ಆದರೆ, ನಟ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಪೊಲೀಸರು ಮತ್ತೊಂದು ನೋಟಿಸ್ ನೀಡಲು ಮುಂದಾಗಿದ್ದಾರೆ.