ಉದಯಪುರ, ಫೆ. 27 (DaijiworldNews/TA): ದಕ್ಷಿಣ ಚಿತ್ರರಂಗದ ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 26ರಂದು ಬೆಳಿಗ್ಗೆ 10.10ರ ಮುಹೂರ್ತದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿತು. ಈ ಸುಸಂದರ್ಭದಲ್ಲಿ ಅತ್ತೆಯ ಉಡುಗೊರೆ ನೋಡಿ ಸೊಸೆ ಭಾವುಕರಾಗಿದ್ದಾರೆ.

ಸಂಜೆ 4.30ರ ಸುಮಾರಿಗೆ ಕೊಡವ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆ ಶಾಸ್ತ್ರಗಳು ಜರುಗಿದವು. ಈ ವಿಶೇಷ ಸಂದರ್ಭದಲ್ಲಿ ವಿಜಯ್ ದೇವರಕೊಂಡ ತಾಯಿ ರಶ್ಮಿಕಾಗೆ ಕೊಡಗಿನ ಶೈಲಿಯ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡಿದರು. ಜೊತೆಗೆ ತಮ್ಮ ಕುಟುಂಬದಲ್ಲಿ ತಲೆತಲಾಂತರಗಳಿಂದ ಬಂದಿರುವ ಚಿನ್ನದ ಬಳೆಗಳನ್ನು ಸೊಸೆಗೆ ಕಾಣಿಕೆಯಾಗಿಸಿದರು. ಅಮೂಲ್ಯ ಉಡುಗೊರೆಗಳನ್ನು ಕಂಡು ರಶ್ಮಿಕಾ ಭಾವುಕರಾದರು.
ವಿಜಯ್ ದೇವರಕೊಂಡ ಪಂಚೆಕಟ್ಟಿನಲ್ಲಿ ರಾಜಮರ್ಯಾದೆಯಂತೆ ಮಿಂಚಿದರೆ, ರಶ್ಮಿಕಾ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಆಭರಣಗಳಲ್ಲಿ ದೇವಸೇನೆಯಂತೆ ಕಂಗೊಳಿಸಿದರು. 3 ದಿನಗಳ ಕಾಲ ನಡೆದ ಈ ವಿವಾಹದಲ್ಲಿ ಮೆಹಂದಿ, ಹಳದಿ ಮತ್ತು ಸಂಗೀತ್ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಮದುವೆಯ ಕೆಲ ಚಿತ್ರಗಳನ್ನು ಜೋಡಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.