ಹೈದರಾಬಾದ್, ಮಾ. 03 (DaijiworldNews/AA): ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯಾದ ಬೆನ್ನಲ್ಲೇ ತಮ್ಮ ಅಭಿಮಾನಿಗಳಿಗೆ ಸಿಹಿ ಕಳಿಸಿದ್ದ ಈ ಜೋಡಿ ಇದೀಗ ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡಲು ಮುಂದಾಗಿದೆ.

ತಮ್ಮ ಮದುವೆಗೆ ಸುಮಾರು ಕೋಟಿಗಳೇ ಖರ್ಚು ಮಾಡಿರುವ ಈ ಜೋಡಿ ಇದೀಗ ತಮ್ಮ ದುಡಿಮೆಯ ಕೆಲ ಭಾಗವನ್ನು ಸಮಾಜ ಸೇವೆಗೂ ಬಳಸುತ್ತಿದ್ದಾರೆ. ವಿಜಯ್ ದೇವರಕೊಂಡ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಸುಮಾರು 44 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದ್ದಾರೆ. ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಅಚ್ಚಂಪೇಟೆ ವಿಭಾಗದ ಸುಮಾರು 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 'ದೇವರಕೊಂಡ ಚಾರಿಟಬಲ್ ಟ್ರಸ್ಟ್' ಮೂಲಕ ವಿದ್ಯಾರ್ಥಿವೇತನ ನೀಡಲು ವಿಜಯ್ ಮತ್ತು ರಶ್ಮಿಕಾ ತೀರ್ಮಾನ ಮಾಡಿದ್ದಾರೆ.
ಮದುವೆಯ ನಂತರ ವಿಜಯ್ ಅವರ ಪೂರ್ವಜರ ಗ್ರಾಮವಾದ ತುಮ್ಮನಪೇಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ನೀಡುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ಈಗಾಗಲೇ ಈ ದಂಪತಿ ದೇಶದ ವಿವಿಧೆಡೆ ದೇವಸ್ಥಾನಗಳಲ್ಲಿ ಅನ್ನದಾನ ಮಾಡಿದೆ ಮತ್ತು ಅಭಿಮಾನಿಗಳಿಗೆ ಸಿಹಿ ಹಂಚಿದ್ದಾರೆ. ಇದೀಗ ಸರ್ಕಾರಿ ಶಾಲೆ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸಮಾಜ ಸೇವೆಗೂ ಕೈ ಹಾಕಿದ್ದಾರೆ.