ಪ್ಯಾರಿಸ್, ಮೇ. 28 (DaijiworldNews/AA): ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಫ್ರಾನ್ಸ್ ದೇಶಗಳು ಒಟ್ಟಾಗಿ ಹೋರಾಟ ನಡೆಸಲಿವೆ ಎಂದು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ರವಿಶಂಕರ್ ಪ್ರಸಾದ್ ನೇತೃತ್ವದ ಸರ್ವಪಕ್ಷಗಳ ಸಂಸದರನ್ನು ಒಳಗೊಂಡ ನಿಯೋಗವು, ಪಹಲ್ಗಾಮ್ನಲ್ಲಿನ ಉಗ್ರರ ದಾಳಿ ಬಳಿಕ ಭಾರತ ಕೈಗೊಂಡ 'ಆಪರೇಷನ್ ಸಿಂಧೂರ' ಹಾಗೂ ಉಗ್ರವಾದದ ವಿರುದ್ಧ ಭಾರತ ಕೈಗೊಂಡಿರುವ ಹೋರಾಟ ಕುರಿತು ತಿಳಿಸಿದೆ.
'ಭಯೋತ್ಪಾದನೆ ವಿರುದ್ಧ ಇಡೀ ಜಗತ್ತು ಧ್ವನಿ ಎತ್ತುವ ಅಗತ್ಯವಿದೆ. ಅದರಂತೆ ಭಯೋತ್ಪಾದನೆ ವಿರುದ್ದ ಭಾರತ ನಡೆಸುತ್ತಿರುವ ಹೋರಾಟಕ್ಕೆ ಫ್ರಾನ್ಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಫ್ರಾನ್ಸ್ನ ಸೆನೆಟರ್ಗಳು ಭರವಸೆ ನೀಡಿದೆ. ಪಾಕಿಸ್ತಾನ ಮತ್ತು ಭಯೋತ್ಪಾದನೆಯ ನಡುವಿನ ವ್ಯತ್ಯಾಸ ಈಗ ಮಾಯವಾಗಿದೆ. ಪಾಕ್ ಸೇನೆ ಭಯೋತ್ಪಾದನೆಯನ್ನು ಸಾಧನವಾಗಿ ಬಳಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಭಾರತೀಯರಂತೆ ನಾವೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇವೆ. ಭಯೋತ್ಪಾದನೆ ಎಂಬುದು 'ಕ್ಯಾನ್ಸರ್' ಇದ್ದಂತೆ. ಇದರ ವಿರುದ್ಧ ನಾವು ಒಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಬಲಶಾಲಿಯಾಗುತ್ತೇವೆ' ಎಂದು ಫ್ರಾನ್ಸ್ನ ಸೆನೆಟರ್ರೊಬ್ಬರು ಹೇಳಿದ್ದಾರೆ.