ತಜಕಿಸ್ತಾನ, ಜೂ. 01 (DaijiworldNews/AA): ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಮೂಲಕ ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತವು ತಜಕಿಸ್ತಾನದಲ್ಲಿ ತಿಳಿಸಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ 1960ರ ಒಪ್ಪಂದವನ್ನು ಸ್ಥಗಿತಗೊಳಿಸಿದ ತನ್ನ ಕ್ರಮವನ್ನು ಸಮರ್ಥಿಸಿಕೊಂಡ ಭಾರತ, ಭಯೋತ್ಪಾದನೆ ಹರಡುತ್ತಾ ಸಿಂಧೂ ಜಲ ಒಪ್ಪಂದ ಉಲ್ಲಂಘಿಸಿ ಈಗ ನಮ್ಮನ್ನು ದೂಷಿಸುವುದು ಸರಿಯಲ್ಲ ಎಂದು ಪಾಕ್ಗೆ ಸ್ಪಷ್ಟ ಸಂದೇಶ ನೀಡಿದೆ.
ದುಶಾಂಬೆಯಲ್ಲಿ ನಡೆದ ಹಿಮನದಿಗಳ ಸಂರಕ್ಷಣಾ ಸಮ್ಮೇಳನದಲ್ಲಿ ಕೇಂದ್ರ ಸಚಿವ ಕೀತರ್ತ ವರ್ಧನ್ ಸಿಂಗ್ ಭಾಗವಹಿಸಿದ್ದರು. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿಶ್ವಸಂಸ್ಥೆ ನೇತೃತ್ವದ ಜಾಗತಿಕ ವೇದಿಕೆಯಲ್ಲಿ ಭಾರತವು ನೀರನ್ನು ಅಸ್ತ್ರವನ್ನಾಗಿಸುತ್ತಿದೆ ಎಂದು ಆರೋಪಿಸಿದ್ದರು.
ಪಾಕಿಸ್ತಾನವು ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ವೇದಿಕೆಯ ವ್ಯಾಪ್ತಿಗೆ ಬರದ ವಿಷಯಗಳ ಬಗ್ಗೆ ಅನಗತ್ಯ ಉಲ್ಲೇಖಗಳನ್ನು ತರುವ ಪ್ರಯತ್ನವನ್ನು ನಾವು ನೋಡಿದ್ದೇವೆ. ಅಂತಹ ಪ್ರಯತ್ನವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಒಪ್ಪಂದವನ್ನು ಉಲ್ಲಂಘಿಸುತ್ತಿರುವ ಪಾಕಿಸ್ತಾನವು, ಒಪ್ಪಂದದ ಉಲ್ಲಂಘನೆಯ ಹೊಣೆಯನ್ನು ಭಾರತದ ಮೇಲೆ ಹೊರಿಸುವುದನ್ನು ನಿಲ್ಲಿಸಬೇಕು, ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಪರಿಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳಾಗಿವೆ ಎಂಬುದು ನಿರಾಕರಿಸಲಾಗದ ಸತ್ಯ, ಇದು ಒಪ್ಪಂದದ ನಿಯಮಗಳನ್ನು ಮರುಪರಿಶೀಲಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ ಎಂದರು.ಈ ಬದಲಾವಣೆಗಳಲ್ಲಿ ತಾಂತ್ರಿಕ ಪ್ರಗತಿ, ಜನಸಂಖ್ಯಾ ಬೆಳವಣಿಗೆ, ಹವಾಮಾನ ಬದಲಾವಣೆ ಮತ್ತು ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ಸೇರಿವೆ ಎಂದು ಕೀತರ್ತ ವರ್ಧನ್ ಸಿಂಗ್ ತಿಳಿಸಿದ್ದಾರೆ.
ಆದಾಗ್ಯೂ, ಪಾಕಿಸ್ತಾನದಿಂದ ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯು ಒಪ್ಪಂದವನ್ನು ಅದರ ನಿಬಂಧನೆಗಳ ಪ್ರಕಾರ ಬಳಸುವ ಭಾರತದ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ. ಒಪ್ಪಂದವನ್ನು ಉಲ್ಲಂಘಿಸುತ್ತಿರುವ ಪಾಕಿಸ್ತಾನ, ಅದಕ್ಕೆ ಭಾರತವನ್ನು ದೂಷಿಸುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.