ಒಟ್ಟಾವ, ಜು. 10 (DaijiworldNews/AA): ಕೆನಡಾದ ಮನಿಟೊಬಾ ಪ್ರದೇಶದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಭಾರತ ಮೂಲದ ತರಬೇತಿ ನಿರತ ಪೈಲಟ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಟೊರೆಂಟೊದ ಭಾರತದ ರಾಯಭಾರ ಕಚೇರಿ ಮಾಹಿತಿ ನೀಡಿದೆ.

ಮೃತ ಪೈಲಟ್ ಅನ್ನು ಶ್ರೀಹರಿ ಸುಕೇಶ್ ಎಂದು ಗುರುತಿಸಲಾಗಿದ್ದು, ಶ್ರೀಹರಿ ಹಾರಿಸುತ್ತಿದ್ದ ಸಿಂಗಲ್ ಎಂಜಿನ್ ವಿಮಾನಕ್ಕೆ ಕೆನಡಾದ ಯುವಕನೊಬ್ಬ ಚಲಾಯಿಸುತ್ತಿದ್ದ ಅದೇ ಮಾದರಿಯ ಮತ್ತೊಂದು ವಿಮಾನವು ಆಕಾಶದಲ್ಲಿ ಡಿಕ್ಕಿ ಹೊಡೆದಿದೆ.
ದುಃಖಿತ ಕುಟುಂಬ, ಪೈಲಟ್ ತರಬೇತಿ ಶಾಲೆ ಮತ್ತು ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗಿದೆ ಎಂದು ಬುಧವಾರ ಭಾರತದ ಕಾನ್ಸುಲೇಟ್ ಜನರಲ್ ತಿಳಿಸಿದ್ದಾರೆ.
ಇಬ್ಬರೂ ತರಬೇತಿ ನಿರತ ಪೈಲಟ್ಗಳು ಟೇಕ್ಆಫ್ ಮತ್ತು ಲ್ಯಾಂಡಿಂಗ್ ಅಭ್ಯಾಸ ಮಾಡುತ್ತಿದ್ದರು. ಲ್ಯಾಂಡಿಂಗ್ ಸ್ಟ್ರಿಪ್ ಸಮೀಪಿಸುತ್ತಿದ್ದಾಗ ವಿಮಾನಗಳು ಪರಸ್ಪರ ಡಿಕ್ಕಿ ಆಗಿವೆ ಎಂದು ಸಿಬಿಸಿ ವರದಿ ಹೇಳಿದೆ.
ಈ ಭೀಕರ ದುರಂತದ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕೆನಡಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.