ದುಬೈ , ಅ. 21 (DaijiworldNews/AK): ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ ಊದು ಮೇಥಾದ ಗ್ಲೆಂಡೇಲ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಅಕ್ಟೋಬರ್ 25 ರಂದು ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ ನಡೆಯಲಿದೆ.


ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಾಧಕರಿಗೆ ಗೌರವ ಸನ್ಮಾನ ನಂತರ ಯುಎಇಯ ಪ್ರಸಿದ್ಧ ನೃತ್ಯ ತಂಡದವರಿಂದ ನೃತ್ಯ ವೈಭವ,ಗಾಯಕ ಗಾಯಕಿಯರಿಂದ ಸಂಗೀತ ಸುಧೆ,ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತಂಡದವರಿಂದ ಗಡಿನಾಡ ಯಕ್ಷ ಕವಿ ಪಾರ್ತಿಸುಬ್ಬ ವಿರಚಿತ ಶ್ರೀ ಕೃಷ್ಣ ಬಾಲಲೀಲೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ರಾತ್ರಿ 8ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರದ ಅಧ್ಯಕ್ಷರಾದ ಸೋಮನ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕರ್ನಾಟಕ ರಾಜ್ಯ ಹೆಲ್ತ್ ಕೌನ್ಸಿಲ್ ನ ಅಧ್ಯಕ್ಷರಾದ ಡಾ.ಯು.ಟಿ.ಇಪ್ತಿಕಾರ್ ಅಲಿ, ಕಾಸರಗೋಡಿನ ಶಾಸಕರಾದ ಎನ್.ಎ ನೆಲ್ಲಿಕುನ್ನು, ಮಂಜೇಶ್ವರದ ಶಾಸಕರದ ಎ.ಕೆ.ಎಂ.ಅಶ್ರಪ್ ಮತ್ತು ಊರಿನ ಹಾಗೂ ಯುಎಇ ಉದ್ಯಮಿಗಳು ಉಪಸ್ಥಿತರಿರುವರು.
ಸಾಧಕರಿಗೆ ಗೌರವ ಸನ್ಮಾನ: ಸಾಮಾಜಿಕ ಕೈಂಕರ್ಯಗಳನ್ನು ಮಾಡಿಕೊಂಡು ಬಂದಿರುವ ಮಂಗಳೂರಿನ ಉದ್ಯಮಿ ಕಟಪಾಡಿ ಸತ್ಯೆಂದ್ರ ಪೈ,ಕ್ರೀಯೆಟಿವ್ ಕ್ಯಾಟರ್ ಹಾಸ್ಪಿಟಲಿಟಿನ ಆಡಳಿತ ನಿರ್ದೇಶಕರಾದ ಮಂಜುನಾಥ ರಾಜನ್, ಕರ್ನಾಟಕ ಜಾನಪದ ಪರಿಷತ್ ಒಮಾನ್ ನ ಅಧ್ಯಕ್ಷರಾದ ಶಿವಾನಂದ ಕೋಟ್ಯಾನ್ ಕಟಪಾಡಿ.
ಸಾಧಕ ಸಂಸ್ಥೆ : ದುಬೈನಲ್ಲಿ ಕಳೆದ ಹಲವಾರು ವರ್ಷಗಳಿಂದ ಕನ್ನಡದ ವಿದ್ಯಾರ್ಥಿಗಳಿಗೆ ನಮ್ಮ ಮಾತೃ ಭಾಷೆಯ ಕಲಿಕಾ ತರಗತಿಯನ್ನು ಉಚಿತವಾಗಿ ನೀಡುತ್ತಿರುವ "ಕನ್ನಡ ಪಾಠ ಶಾಲೆ ದುಬೈ" ಸಂಸ್ಥೆಯನ್ನು ಗೌರವಿಸಲಾಗುವುದು.
"ಗಡಿನಾಡ ರತ್ನ -2025" ಪ್ರಶಸ್ತಿ ಪ್ರದಾನ :
ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಾಲ್ಕು ಮಂದಿ ಸಾಧಕರಾದ ಉದ್ಯಮಿ ಪ್ರಕಾಶ್ ಕುಂಪಲ,ಬಿ.ಎಂ ಗ್ರೂಪ್ ಮತ್ತು ರೇಡಿಯೋ ಜಿಲ್ಲಿನ ಆಡಳಿತ ನಿರ್ದೇಶಕರಾದ ಡಾ.ಕನಕರಾಜ್, ಹೋಟೆಲ್ ಉದ್ಯಮಿ ಸಂದೀಪ್ ಶೆಟ್ಟಿ,ಮ್ಯಾಕ್ಸ್ ಕ್ಯಾರ್ ಕ್ಲಿನಿಕ್ ದುಬೈ ಆಡಳಿತ ನಿರ್ದೇಶಕರಾದ ಬಶೀರ್ ಕಿನ್ನಿಂಗಾರ್ ರವರನ್ನು "ಗಡಿನಾಡ ರತ್ನ -2025" ಪ್ರಶಸ್ತಿ ನೀಡಿ ಗೌರವಿಸಲಾಗುವುದು.