ಇಸ್ಲಾಮಾಬಾದ್, ಜು. 05 (DaijiworldNews/AA): ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ಹಣದುಬ್ಬರ, ದಬ್ಬಾಳಿಕೆ ಖಂಡಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆ ಭಾನುವಾರ ಗಂಭೀರ ಸ್ವರೂಪಕ್ಕೆ ತಿರುಗಿದೆ.

ಈ ಪ್ರದೇಶಗಳಲ್ಲಿನ ನಿರ್ಬಂಧ ಕೊನೆಗೊಳಿಸುವುದು, ಸಂವಹನ ಸೌಲಭ್ಯ ಪುನಃಸ್ಥಾಪಿಸುವುದು, ಆಹಾರ ಮತ್ತು ಔಷಧಗಳ ನಿರಂತರ ಪೂರೈಕೆ ಖಚಿತಪಡಿಸುವುದು ಹಾಗೂ ಜೈಲಿನಲ್ಲಿರುವ ತಮ್ಮ ನಾಯಕರನ್ನು ಬಿಡುಗಡೆ ಮಾಡುವುದು ಸೇರಿದಂತೆ 38 ಅಂಶಗಳ ಒಪ್ಪಂದವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಅನ್ಬಾರ್ ಪ್ರದೇಶದಲ್ಲಿ ಪೊಲೀಸರು ಮತ್ತು ಪಾಕಿಸ್ತಾನ ರೇಂಜರ್ಗಳು ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಬೆನ್ನಲ್ಲೇ ಉದ್ವಿಗ್ನತೆ ಹೆಚ್ಚಾಯಿತು. ಗುಂಡಿನ ದಾಳಿಯಲ್ಲಿ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ವಿವಿಧ ಸ್ಥಳಗಳಲ್ಲಿ ನಡೆದ ಗುಂಡಿನ ದಾಳಿ ಮತ್ತು ಅಶ್ರುವಾಯು ಶೆಲ್ ದಾಳಿಯಲ್ಲಿ ನಾಲ್ವರು ಯುವಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನೀಡಿದ್ದ ಕರೆ ಮೇರೆಗೆ ಇಂದು ಮುಜಫರಾಬಾದ್, ರಾವಲಕೋಟ್ ಮತ್ತು ಮಿರ್ಪುರದಂತಹ ಸ್ಥಳಗಳಲ್ಲಿ ಬೃಹತ್ ಜನಸಮೂಹ ಜಮಾಯಿಸಿತ್ತು. ದಡಿಯಾಲ್ನಲ್ಲಿ ಜನಸಮೂಹವು ಭದ್ರತಾ ಸಿಬ್ಬಂದಿಯನ್ನ ಹಿಮ್ಮೆಟ್ಟಿಸಿ ಇಡೀ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದರೆ ಈ ಬಗ್ಗೆ ಪಾಕಿಸ್ತಾನ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.