ಕಾಸರಗೋಡು, ಫೆ.21 (DaijiworldNews/AK): ಮೆಡಿಕಲ್ ಶಾಫ್ ಗೆ ಔಷಧಿ ಖರೀದಿಸುವ ನೆಪದಲ್ಲಿ ಬಂದು ಮಹಿಳೆಯ ಕತ್ತಿನಲ್ಲಿದ್ದ ಮೂರೂವರೆ ಪವನ್ ನ ಚಿನ್ನದ ಕರಿಮಣಿ ಸರ ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ಕುಂಜೂರು ಪಂಜ ನಿವಾಸಿ ಶಂಸುದ್ದೀನ್ ಅಸ್ಕರ್ ಅಲಿ(28), ಪುತ್ತೂರು ಬನ್ನೂರು ನಿವಾಸಿ ನೌಷಾದ್ ಬಿ.ಎ(37) ಬಂಧಿತ ಆರೋಪಿಗಳು. ಬದಿಯಡ್ಕ ಪೊಲೀಸರು ಇವರನ್ನು ಬೆಂಗಳೂರಿನಿಂದ ಬಂಧಿಸಿದ್ದಾರೆ.
ಜನವರಿ 11 ರಂದು ಸಂಜೆ 3.30 ಕ್ಕೆ ನೀರ್ಚಾಲು ಮೇಲಿನ ಪೇಟೆಯಲ್ಲಿ ಈ ಘಟನೆ ನಡೆದಿದೆ. ಸರೋಜಿನಿ ಎಸ್.ಎನ್.ಅವರ ಮಾಲಕತ್ವದಲ್ಲಿರುವ ರಾಘವೇಂದ್ರ ಆಯುರ್ವೇದ ಮೆಡಿಕಲ್ ನಲ್ಲಿ ಕಳವು ನಡೆದಿದೆ. ಬೈಕ್ ನಲ್ಲಿ ಇಬ್ಬರು ಯುವಕರು ಆಗಮಿಸಿದ್ದು ಒಬ್ಬ ಬೈಕಿನಲ್ಲೇ ಕುಳಿತಿದ್ದು ಇನ್ನೊಬ್ಬ ಮೆಡಿಕಲ್ ಒಳಗೆ ಪ್ರವೇಶಿಸಿ ಔಷದ ಬೇಕೆಂದು ಕೇಳಿದನೆನ್ನಲಾಗಿದೆ.
ಔಷದಿ ನೀಡುವ ಮದ್ಯೆ ಯುವಕ ಸರೋಜಿನಿ ಅವರ ಕತ್ತಿನಲ್ಲಿದ್ದ ಮೂರುವರೆ ಪವನು ತೂಕದ ಚಿನ್ನದ ಕರಿಮಣಿ ಎಗರಿಸಿ ಬೈಕ್ ಹತ್ತಿದ್ದು ಅನಂತರ ಇಬ್ಬರೂ ಪರಾರಿಯಾಗಿದ್ದಾರೆ.
ಈ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದರು. ಸಿಸಿ ಟಿ.ವಿ ಕ್ಯಾಮರಾ, ಸೈಬರ್ ಸೆಲ್ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಳವುಗೈದ ಆಭರಣವನ್ನು ಮಂಗಳೂರಿನ ಚಿನ್ನದಂಗಡಿಯೊಂದರಲ್ಲಿ ಮಾರಾಟ ಮಾಡಿದ್ದು ವಶ ಪಡಿಸಿಕೊಳ್ಳಲಾಗಿದೆ .