ಬಂಟ್ವಾಳ, ಫೆ.22 (DaijiworldNews/AA): ವೀರಕಂಭ ಗ್ರಾಮದ ಕೆಲಿಂಜದ ಬಲ್ಲಮಲೆ ಅರಣ್ಯ ಇಲಾಖೆಗೆ ಸೇರಿದ ಸಿರಿ ಚಂದನ ವನದಲ್ಲಿರುವ ಚಂದನ ಮರಗಳ ಸಹಿತ ಲಕ್ಷಾಂತರ ರೂ ಬೆಲೆಬಾಳುವ ಗುಣಮಟ್ಟದ ಮರಗಳನ್ನು ವಿದ್ಯುತ್ ಪ್ರಸರಣದ ಖಾಸಗಿ ಕಂಪೆನಿಯೊಂದು ಮರಗಳ ಕಡಿದು ಮಾರಣಹೋಮ ಮಾಡಿದೆ ಎಂಬ ಆರೋಪ ಮಾಡಿರುವ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯವರು ಕೆಲಿಂಜದಲ್ಲಿ ಕಂಪೆನಿ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ಉಡುಪಿ- ಕಾಸರಗೋಡು 400 ಕೆ.ವಿ. ವಿದ್ಯುತ್ ಪೂರೈಕೆಗಾಗಿ ಗುತ್ತಿಗೆ ವಹಿಸಿಕೊಂಡ ಖಾಸಗಿ ಕಂಪೆನಿ ಕೆಲಿಂಜ ಬಲ್ಲಮಲೆ ಅರಣ್ಯ ಇಲಾಖೆಗೆ ಸೇರಿದ ಗುಡ್ಡೆಯಲ್ಲಿ ಟವರ್ ನಿರ್ಮಾಣದ ಕಾಮಗಾರಿ ಆರಂಭಿಸಿದೆ.
ಟವರ್ ನಿರ್ಮಾಣದ ವೇಳೆ ಲಕ್ಷಾಂತರ ರೂ ಬೆಲೆ ಬಾಳುವ ಗುಣಮಟ್ಟದ ಮರಗಳನ್ನು ಸಾಯಿಸಿ ಪಕೃತಿ ಮೇಲೆ ಪ್ರಭಾವ ಬೀರಿದೆ ಎಂದು ಆರೋಪ ಮಾಡಿದ ರೈತ ಸಂಘ, ರಸ್ತೆಯನ್ನು ಕಡಿದು ಕಾಮಗಾರಿಗೆ ತಡೆಯೊಡ್ಡಿರುವ ಘಟನೆ ನಡೆದಿದೆ.
ಟವರ್ ಕಾಮಗಾರಿಗಾಗಿ ಕೆಲಿಂಜ ಬಲ್ಲಮಲೆ ಗುಡ್ಡದಲ್ಲಿ ನಿರ್ಮಿಸಿಲಾದ ರಸ್ತೆಯನ್ನು ರೈತಸಂಘದವರು ಅಗೆದು ಸಂಪರ್ಕವನ್ನು ಕಡಿತಗೊಳಿಸಿದ್ದರು. ಮತ್ತು ಕಂಪೆನಿಯ ಅವೈಜ್ಞಾನಿಕ ಕಾಮಗಾರಿ ವಿರುದ್ದ ಪ್ರತಿಭಟನೆ ಕೂಡ ನಡೆಸಲಾಗಿದೆ. ಆದರೆ ಪೋಲೀಸ್ ಇಲಾಖೆಯವರ ಸಹಕಾರ ಪಡೆದ ಕಂಪೆನಿ ಇದೀಗ ರಸ್ತೆಯನ್ನು ರಿಪೇರಿ ಮಾಡಿ ಮತ್ತೆ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ.
ದ.ಕ.ಜಿಲ್ಲೆಗೆ ಬಂದಿರುವ ಮಹಾಮಾರಿ ಇದ್ದಾಗಿದ್ದು, ಕಳ್ಳ ಕಂಪನಿಯ ಯೋಜನೆಯಾಗಿದೆ. ಈ ಯೋಜನೆಗಾಗಿ ಕೆಲಿಂಜ ಪರಿಸರದಲ್ಲಿ ಬೆಳೆಬಾಳುವ ಮರಗಳನ್ನುಕಡಿಯಲಾಗಿದೆ. ಕಾಡನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ಆರೋಪಿಸಿದ್ದಾರೆ. ಜಮೀನು ಕಳೆದುಕೊಳ್ಳುವ ಕೃಷಿಕರಿಗೆ ಯಾವುದೇ ನೋಟೀಸ್ ನೀಡದೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕೆ ರಾಜಕೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಸಹಕಾರ ನೀಡುವುದು ಬೇಸರದ ವಿಚಾರ. ಬಡವರ ಕೃಷಿ ಭೂಮಿಯನ್ನು ಕಸಿದು ತಿನ್ನುವ ಕಂಪನಿಯಿಂದ ರೈತರು ಭಯದಿಂದ ಬದುಕುವಂತಾಗಿದೆ ಎಂದು ಅವರು ಹೇಳಿದ್ದಾರೆ.