ಬಂಟ್ವಾಳ, ಮಾ.02(DaijiworldNews/TA) : ತಾಲೂಕಿನ ಐತಿಹಾಸಿಕ ಹಿನ್ನಲೆಯ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸರಿಸುಮಾರು105 ವರ್ಷಗಳ ಬಳಿಕ ನಡೆಯುವ ಶತಚಂಡಿಕಾಯಾಗಕ್ಕೆ ಶನಿವಾರ ಚಾಲನೆ ದೊರೆತಿದೆ.


ಬ್ರಹ್ಮಶ್ರೀ ವೇ.ಮೂ.ಪೊಳಲಿ ಶ್ರೀಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಮಾಧವಭಟ್,ನಾರಾಯಣ ಭಟ್,ಪರಮೇಶ್ವರ ಭಟ್ ಮತ್ತು ರಾಮ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ,108 ಕಾಯಿಯ ಗಣಪತಿ ಹೋಮ ನಡೆದು ಸಪ್ತಸತಿ ಪಾರಾಯಣ, ನವಾಕ್ಷರೀ ಜಪಕ್ಕೆ ಚಾಲನೆ ನೀಡಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಸಹಿತ ಸ್ಥಳೀಯ ಪ್ರಮುಖರು ಹಾಜರಿದ್ದರು.
ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ 105 ವರ್ಷ ಗಳ ಹಿಂದೆ ಶತಚಂಡಿಕಾಯಾಗ ನಡೆದಿರುವ ಬಗ್ಗೆ ದೇವಳದ ದಾಖಲೆ ಮತ್ತು ಇತಿಹಾಸ ತಿಳಿಸುತ್ತದೆ.ತದನಂತರ ಅದೇ ಮಾದರಿಯಲ್ಲಿ ಲೋಕಕಲ್ಯಾಣಾರ್ಥ ಮತ್ತು ಸಾನಿಧ್ಯವೃದ್ಧಿಗಾಗಿ ಶತಚಂಡಿಕಾಯಾಗ ನಡೆಸಲಾಗುತ್ತಿದೆ. ಮಾ. 4 ರವರೆಗೆ ವಿವಿಧ ವೈಧಿಕ ವಿಧಿ ವಿಧಾನ,ಹೋಮಾಧಿಗಳು,ಪರಾಯಣಗಳು ನಡೆಯಲಿದ್ದು,ಮಾ.5 ರಂದು ಬೆ. 6 ಗಂಟೆಗೆ ಶತಚಂಡಿಕಾಯಾಗ ಆರಂಭವಾಗಲಿದ್ದು,ಮಧ್ಯಾಹ್ನ ಯಾಗದ ಪೂರ್ಣಾಹುತಿ ಬಳಿಕ ದೇವರಿಗೆ ಮಹಾಪೂಜೆ,ಅನ್ನಸಂತರ್ಪಣೆ ನಡೆಯಲಿದೆ.ಮಾ.6 ರಂದು ಸೇವಾರೂಪದ ದೊಡ್ಡ ರಂಗಪೂಜೆ ಉತ್ಸವವು ನಡೆಯಲಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ಸಮಿತಿಗಳು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ.25 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಭಗವದ್ಬಕ್ತರು ಅಗಮಿಸುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದು, ಕ್ಷೇತ್ರದ ಬ್ರಹ್ಮಕಲಶದ ಸಂದರ್ಭದಲ್ಲಿ ದುಡಿದಿರುವ ಸಾವಿರಾರು ಸ್ವಯಂಸೇವಕರು,ವಿವಿಧ ಸಂಘಸಂಸ್ಥೆಗಳು ಸಹಿತ ಭಕ್ತಸಮೂಹ ಸ್ವಯಂಸೇವಕರಾಗಿ ತೊಡಗಿಸಿಕೊಳ್ಳಲಿದ್ದಾರೆ. 105 ವರ್ಷಗಳ ಬಳಿಕ ನಡೆಯುವ ಈ ವಿಶೇಷವಾದ ಶತಚಂಡಿಕಾಯಾಗವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪೊಳಲಿ ಅಸುಪಾಸಿನ ಎಲ್ಲಾ ಗ್ರಾಮದಲ್ಲು ಶಾಸಕ ರಾಜೇಶ್ ನಾಯ್ಕ್ ಸಾರಥ್ಯದಲ್ಲಿ ಸಭೆಗಳನ್ನು ನಡೆಸಿ ಪ್ರತಿಯೋರ್ವರನ್ನು ಈ ಪಣ್ಯಕಾರ್ಯದಲ್ಲಿ ತೊಡಗಿಸಿಕೊಳ್ಳಲು ವಿನಂತಿಸಲಾಗಿತ್ತು.
ಹೊರೆಕಾಣಿಕೆ ಮೆರವಣಿಗೆ:
ಶತಚಂಡಿಕಾಯಾಗದ ಪ್ರಯುಕ್ತ ಶನಿವಾರ ಸಂಜೆ ಅದ್ದೂರಿಯ ಹೊರೆಕಾಣಿಕೆ ಮೆರವಣಿಗೆಯು ನಡೆಯಿತು. ವಿವಿಧ ಕಡೆಗಳಿಂದ ಬಂದಂತ ಹೊರೆಕಾಷಿಕಯನ್ನುಪೊಳಲಿ ದ್ವಾರದಿಂದ ಕ್ಷೇತ್ರದವರೆಗೆ ಮೆರವಣಿಗೆಯಲ್ಲಿತರಲಾಯಿತು.