ಕುಂದಾಪುರ, ಮಾ.08(DaijiworldNews/TA): ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕಾರೊಂದು ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಕಾರನ್ನು ರಸ್ತೆ ಮಧ್ಯೆಯೇ ಬಿಟ್ಟು ಪರಾರಿಯಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡಮ್ಮಾಡಿ ಕ್ರಾಸ್ ಬಳಿ ನಡೆದಿದೆ.








ಬಂಧಿತ ಆರೋಪಿಗಳನ್ನು ಭಟ್ಕಳ ಗುಲ್ಮಿ ನಿವಾಸಿ ಮುಹಮ್ಮದ್ ಅಬೀದ್ (18), ಮೂಡುಗೋಪಾಡಿ ನಿವಾಸಿ ಮುಹಮ್ಮದ್ ಅಬಾನ್ ಅಲಿಯಾಸ್ ಕಾಕಿ ಮಿಂಡಾ (19) ಮತ್ತು ಗುಲ್ವಾಡಿ ನಿವಾಸಿ ಮೊಹಮ್ಮದ್ ಶಿನಾನ್ ಅಲಿಯಾಸ್ ಚಿನ್ನು (19) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ತೌಹೀದ್ ನದಿಯಲ್ಲಿ ಈಜಿಕೊಂಡು ಪರಾರಿಯಾಗಿದ್ದಾನೆ. ಬಂಟ್ವಾಡಿಯಿಂದ ಆಲೂರು ಕಡೆಗೆ ಚಲಿಸುತ್ತಿದ್ದ ಪಿಕಪ್ ವಾಹನಕ್ಕೆ ಎದುರಿನಿಂದ ಬಂದ ಸ್ವಿಫ್ಟ್ ಕಾರೊಂದು ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿ ಅಕ್ರಮವಾಗಿ ಗಂಡು ಕರುವೊಂದನ್ನು ಸಾಗಿಸುತ್ತಿರುವುದು ಕಂಡುಬಂದಿದೆ.
ಅಫಘಾತದಿಂದ ಹೆದರಿದ ಆರೋಪಿಗಳು ಕಾರನ್ನು ಮಧ್ಯ ರಸ್ತೆಯಲ್ಲಿಯೇ ಬಿಟ್ಟು ಸೌಪರ್ಣಿಕಾ ಹೊಳೆಗೆ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಪೊಲೀಸರು ಸ್ಥಳೀಯರ ಸಹಕಾರದಿಂದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.