ಬಂಟ್ವಾಳ, ಮಾ.9(DaijiworldNews/TA): ಅಂತೂ ಅನೇಕ ಊಹಾಪೋಹಗಳಿಗೆ ಕಾರಣವಾಗಿದ್ದ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ ನಿಗೂಢ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ತಾನು ಮನೆಬಿಟ್ಟು ಹೋಗಲು ಕಾರಣವೇನು ಎಂಬುವುದಾಗಿ ಪೊಲೀಸರ ಮುಂದೆ ದಿಗಂತ್ ಹೇಳಿದ್ದಾನೆ. ದ್ಚಿತೀಯ ಪಿಯುಸಿ ಪರೀಕ್ಷೆ ಭಯದಿಂದ ಮನೆಬಿಟ್ಟು ಹೋಗಿರುವುದಾಗಿ ಪೊಲೀಸರಿಗೆ ಆತ ಮಾಹಿತಿ ನೀಡಿದ್ದಾನೆ. ಫೆಬ್ರವರಿ 25ರಂದು ನಾಪತ್ತೆಯಾಗಿದ್ದ ದಿಗಂತ್ 12 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆಯಾಗಿದ್ದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ನಾಪತ್ತೆಯಾಗಿ ಎಲ್ಲಿದ್ದ ಅನ್ನೋ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಆತನಿಂದ ಮಾಹಿತಿ ಪಡೆದಿದ್ದಾರೆ. ಮೊದಲ ದಿನ ಮನೆ ಬಳಿ ರೈಲ್ವೆ ಟ್ರ್ಯಾಕ್ ಹತ್ತಿರ ಹೋಗಿದ್ದ ದಿಗಂತ್, ಅಲ್ಲಿ ಚಪ್ಪಲಿ ಬಿಚ್ಚಿಟ್ಟು ಶೂ ಹಾಕಿಕೊಂಡಿದ್ದಾನೆ. ನಂತರ ಅಪರಿಚಿತರ ಬೈಕ್ಏರಿ ಮಂಗಳೂರಿಗೆ ಹೋಗಿದ್ದಾನೆ. ಮಂಗಳೂರಿನಿಂದ ಬಸ್ ಮೂಲಕ ಶಿವಮೊಗ್ಗ ತಲುಪಿ, ಅದಾದ ಬಳಿಕ ಶಿವಮೊಗ್ಗದಿಂದ ಮೈಸೂರಿಗೆ ಹೋಗಿದ್ದಾನೆ. ಮೈಸೂರಿನಲ್ಲಿ ಟ್ರೈನ್ ಹತ್ತಿ ಬೆಂಗಳೂರಿಗೆ ಹೋಗಿದ್ದಾನೆ. ಅಲ್ಲಿಂದ ನಂದಿಬೆಟ್ಟಕ್ಕೆ ತೆರಳಿ, ಅಲ್ಲಿಯ ಹೊಟೇಲ್ ಒಂದರಲ್ಲಿ ಮೂರು ದಿನ ಕೆಲಸ ಮಾಡಿ 3000 ಸಂಪಾದನೆ ಮಾಡಿದ್ದಾನೆ ಎಂಬ ವಿಚಾರ ತಿಳಿದು ಬಂದಿದೆ. ನಂತರ ಅನೇಕ ಸ್ಥಳಗಳಲ್ಲಿ ಸುತ್ತಾಟ ನಡೆಸಿ, ಶನಿವಾರ ಬೆಂಗಳೂರಿನಲ್ಲಿ ಮುರುಡೇಶ್ವರ ಎಕ್ಸ್ಪ್ರೆಸ್ ಟ್ರೈನ್ ಹತ್ತಿ ಉಡುಪಿಗೆ ತುಲುಪಿದ್ದಾನೆ. ತದನಂತರ ಉಡುಪಿಯಲ್ಲಿ ಪತ್ತೆಯಾಗಿ ಪೊಲೀಸರು ಆತನನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.
ಒಟ್ಟಾರೆ ದಿಗಂತ್ ನಾಪತ್ತೆ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ದಿಗಂತ ನಾಪತ್ತೆ ಹಿಂದೆ ಗಾಂಜಾ ವ್ಯಸನಿಗಳ ಕೈವಾಡವಿದೆ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಅಲ್ಲದೇ, ದಿಗಂತ್ ಬಂಟ್ವಾಳ ತಾಲೂಕಿನ ಸಜಿಪ ಮೂಲದ ಮಂಗಳಮುಖಿಯ ಜೊತೆಗೆ ಹೋಗಿದ್ದಾನೆ ಎಂದು ವಂದತಿ ಕೂಡ ಹಬ್ಬಿತ್ತು. ಈ ವಂದತಿಗಳಿಂದ ಪೋಷಕರು ಗಾಭರಿಗೊಂಡಿದ್ದರು.ಕೊನೆಗೂ ಊಹಾಪೋಹಗಳಿಗೆ ಪ್ರಕರಣದ ಸುಖಾಂತ್ಯ ತೆರೆ ಎಳೆದಿದೆ.