ಕಾಸರಗೋಡು, ಮಾ.9(DaijiworldNews/TA): ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹಾಗೂ ಆಟೋ ರಿಕ್ಷಾ ಚಾಲಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಕಯ್ಯಾರ್ ಮಂಡೆಕಾಪು ಎಂಬಲ್ಲಿ ನಡೆದಿದೆ.


ಮಂಡೆಕಾಪುವಿನ ಪ್ರಿಯೇಶ್ - ಚಂದ್ರಾವತಿ ದಂಪತಿ ಪುತ್ರಿ ಶ್ರೇಯಾ ( 15) ಮತ್ತು ಆಟೋ ಚಾಲಕ ಪ್ರದೀಪ್ ( 42) ಮೃತಪಟ್ಟವರು. ಮನೆಯಿಂದ ಅರ್ಧ ಕಿ. ಮೀ ದೂರದ ಕಾಡಿನಲ್ಲಿ ಆದಿತ್ಯವಾರ ಬೆಳಿಗ್ಗೆ 10. 30 ರ ವೇಳೆಗೆ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತನಿಖೆ ನಡೆಸಿದ್ದರು . ಆದರೆ ತಿಂಗಳಾಗುತ್ತಾ ಬಂದರೂ ಇಬ್ಬರ ಬಗ್ಗೆ ಯಾವುದೇ ಸುಳಿವು ಲಭಿಸದ ಹಿನ್ನಲೆಯಲ್ಲಿ ಶನಿವಾರದಿಂದ ಪೊಲೀಸರು ಹಾಗೂ ಸ್ಥಳೀಯರು ಮನೆ ಪರಿಸರದ ಕಾಡು ಕೇಂದ್ರೀಕರಿಸಿ ಶೋಧ ನಡೆಸಿದ್ದು , ಇಬ್ಬರ ಮೃತದೇಹ ಒಂದೇ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಎರಡು ಮೊಬೈಲ್ ಫೋನ್ , ಒಂದು ಕತ್ತಿ ಪತ್ತೆಯಾಗಿದೆ.
ಫೆಬ್ರವರಿ 11 ರ ರಾತ್ರಿಯಿಂದ ಶ್ರೇಯಾ ದಿಢೀರ್ ನಾಪತ್ತೆಯಾಗಿದ್ದಳು. ಇದರ ಜೊತೆಗೆ ಪ್ರದೀಪ್ ನಾಪತ್ತೆಯಾಗಿದ್ದು , ಇಬ್ಬರು ಪರಾರಿಯಾಗಿರಬಹುದೆಂದು ಶಂಕಿಸಲಾಗಿತ್ತು. ಮೊಬೈಲ್ ಟವರ್ ಕೇಂದ್ರೀಕರಿಸಿ ಮನೆ ಪರಿಸರ ಕಾಡು ಹಾಗೂ ಮನೆ ಕೇಂದ್ರೀಕರಿಸಿ ತನಿಖೆ ನಡೆಸಿದ್ದರು.ಪ್ರದೀಪ್ ನ ಸಂಬಂಧಿಕರಾದ ಮಡಿಕೇರಿ ಗೂ ತೆರಳಿ ಪೊಲೀಸರು ಈ ಹಿಂದೆ ತನಿಖೆ ನಡೆಸಿದ್ದರು. ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದರು . ಶ್ರೇಯಾ ಸ್ಥಳೀಯ ಶಾಲೆಯೊಂದರ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಳು.