ಕೋಟ, ಮಾ.12 (DaijiworldNews/AA): ಕೋಟ ವ್ಯಾಪ್ತಿಯ ಶಿರಿಯಾರ ಕಲಮರ್ಗಿ ರಾಮಮಂದಿರದಲ್ಲಿದ್ದ ರಾಮನ ಮೂರ್ತಿ ಸಹಿತ ಇತರ ಮೂರ್ತಿಗಳನ್ನು ಮಂಗಳವಾರ ರಾತ್ರಿ ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.




ಆದರೆ ಕಳ್ಳರಿಗೆ ಅದೇನನ್ನಿಸಿತೋ ಸಮೀಪದ ಹೊಳೆಯ ಬದಿಯಲ್ಲಿಯೇ ಕದ್ದ ಮೂರ್ತಿಗಳನ್ನು ಬಿಟ್ಟು ಹೋಗಿದ್ದಾರೆ. ಮಂಗಳವಾರ ರಾತ್ರಿ ಕಳವು ನಡೆದಿದ್ದರೆ, ಬುಧವಾರ ಬೆಳಿಗ್ಗೆ ವಿಷಯ ಬೆಳಕಿಗೆ ಬಂದಿದೆ.
ತಕ್ಷಣ ಕೋಟ ಪೊಲೀಸರು ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶ್ವಾನದಳವೂ ಆಗಮಿಸಿದೆ. ಕಳ್ಳರ ಹೆಜ್ಜೆ ಜಾಡನ್ನು ಹಿಂಬಾಸಿದ ಪೊಲೀಸ್ ಶ್ವಾನ ಸಮೀಪದ ಹೊಳೆ ಬದಿಗೆ ಹೋಗಿದೆ. ಶ್ವಾನವನ್ನು ಹಿಂಬಾಲಿಸಿಕೊಂಡು ಹೋದಾಗ ಕಳವಾದ ಮೂರ್ತಿಗಳು ಹೊಳೆ ಬದಿಯಲ್ಲಿ ಇರುವುದು ಕಂಡು ಬಂದಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ಮಾರಿ ಹಬ್ಬ ಜಾತ್ರೆ ನಡೆಯುತ್ತಿದ್ದು, ನಂದಿಕೇಶ್ವರನೇ ಕಳ್ಳರನ್ನು ತಡೆದಿದ್ದಾನೆ ಎಂದು ಜನರು ನಂಬಿದ್ದಾರೆ. ಈ ಪರಿಸರದಲ್ಲಿ ಹಲವು ಸಮಯಗಳಿಂದ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.