ಉಡುಪಿ, ಮಾ.13 (DaijiworldNews/AA): ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ, ಭಾರತೀಯ ರೈಲ್ವೆಯು ಕುಂದಾಪುರ ರೈಲ್ವೇ ನಿಲ್ದಾಣದಲ್ಲಿ ದೆಹಲಿಗೆ ತೆರಳುವ ಎರಡು ರೈಲುಗಳಿಗೆ ಹೆಚ್ಚುವರಿ ನಿಲುಗಡೆಗೆ ಆದೇಶಿಸಿದೆ.

ರೈಲು ಸಂಖ್ಯೆ 22653/22654 ತಿರುವನಂತಪುರಂ ಸೆಂಟ್ರಲ್ - ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್ ಮತ್ತು ರೈಲು ಸಂಖ್ಯೆ 22655/22656 ಎರ್ನಾಕುಲಂ - ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲುಗಳು ಕುಂದಾಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ನೀಡಲಿವೆ.
ಈ ಹೆಚ್ಚುವರಿ ನಿಲುಗಡೆಯಿಂದ ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ದೆಹಲಿ ಮತ್ತು ಇತರ ಉತ್ತರ ಭಾರತದ ಭಾಗಗಳಿಗೆ ಪ್ರಯಾಣಿಸುವುದು ಸುಲಭವಾಗಲಿದೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಹಿಂದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಕುಂದಾಪುರ ರೈಲು ನಿಲ್ದಾಣದಲ್ಲಿ ಈ ನಿಲುಗಡೆಗೆ ಮನವಿ ಮಾಡಿದ್ದರು.