ಬಂಟ್ವಾಳ, ಮಾ.22 (DaijiworldNews/AA): ರಸ್ತೆ ದಾಡುತ್ತಿದ್ದ ಮಹಿಳೆಯೋರ್ವಳಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಪರಂಗಿಪೇಟೆ ಬಳಿ ಶುಕ್ರವಾರ ರಾತ್ರಿ ವೇಳೆ ನಡೆದಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.



10 ನೇ ಮೈಲುಕಲ್ಲು ನಿವಾಸಿ ವಸಂತಿ ಶೆಟ್ಟಿ ಮೃತ ಮಹಿಳೆ.
ಫರಂಗಿಪೇಟೆ ಸಮೀಪದ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ 10ನೇ ಮೈಲುಕಲ್ಲು ಎಂಬಲ್ಲಿ ಪಾದಚಾರಿ ಮಹಿಳೆಯೋರ್ವರಿಗೆ ಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಚೆಂಡಿನಂತೆ ಹೊರಳುತ್ತಾ ಬಸ್ ನಿಲ್ದಾಣದ ಒಳಗಿನಿಂದ ಅಷ್ಟು ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಈ ದೃಶ್ಯ ಸಿಸಿ.ಟಿ.ವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಅಗತ್ಯ ವಸ್ತು ತರಲೆಂದು ಮಹಿಳೆ ಅಂಗಡಿಗೆ ತೆರಳುತ್ತಿದ್ದರು. ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.