ಕಾರ್ಕಳ, ಏ.04 (DaijiworldNews/AA): ಬಹು ವರ್ಷಗಳ ಬೇಡಿಕೆಯಾಗಿದ್ದ ಹಾಗೂ ವಿವಿಧ ಕಾರಣಗಳಿಂದಾಗಿ ಬಾಕಿ ಇದ್ದಂತಹ ಕಾರ್ಕಳದ ಕಬ್ಬಿನಾಲೆ ಗ್ರಾಮದ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಮಲೆಕುಡಿಯ ಕಾಲೋನಿ ಮತ್ತಾವು ಸಂಪರ್ಕಿಸುವ ಸೇತುವೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿಯ ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಮತ್ತಾವು ಪ್ರದೇಶದ ನಿವಾಸಿಗಳು ಮಳೆಗಾಲದಲ್ಲಿ ಸಂದರ್ಭದಲ್ಲಿ ಕಾಡಿನ ಮಧ್ಯ ಹರಿಯುವ ನದಿಯನ್ನು ದಾಟಲು ತುಂಬಾ ಅಪಾಯಕಾರಿಯಾದ ಕಾಲುಸಂಕ ದಾರಿಯನ್ನು ಅವಲಂಬಿಸಬೇಕಾಗಿದೆ. ಇದರಿಂದಾಗಿ ಈ ಪ್ರದೇಶದ ನಿವಾಸಿಗಳು ಹಾಗೂ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ಸೇತುವೆ ಸಹಿತ ರಸ್ತೆ ಅಭಿವೃದ್ಧಿಯು ತೀರಾ ಅವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಮತ್ತಾವು ಕಾಲನಿ ಸಂಪರ್ಕಕ್ಕಾಗಿ ಸರ್ಕಾರದಿಂದ 2 ಕೋಟಿ ರೂ. ಅನುದಾನ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಈ ಸೇತುವೆ ನಿರ್ಮಾಣದಿಂದಾಗಿ ಮಲೆಕುಡಿಯ ಸಮುದಾಯದವರ ಸುಗಮ ಸಂಚಾರಕ್ಕೆ ತುಂಬಾ ಅನುಕೂಲವಾಗುತ್ತದೆ. ಶಾಸಕರ ನಿರಂತರ ಪರಿಶ್ರಮ ಹಾಗೂ ವಿಶೇಷ ಮುತುವರ್ಜಿಯಿಂದಾಗಿ ಮತ್ತಾವು ಪ್ರದೇಶದ ಅರಣ್ಯದಂಚಿನ ಮಲೆಕುಡಿಯ ಸಮುದಾಯದ ನಿವಾಸಿಗಳ ಕಾಲನಿ ಸಂಪರ್ಕಕ್ಕಾಗಿ ನೂತನ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಇದೀಗ ಅನುದಾನ ಮಂಜೂರಾಗಿದ್ದು, ಕಾಮಗಾರಿಯು ಅತೀ ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.