ಬಂಟ್ವಾಳ, ಏ.05 (DaijiworldNews/AK): 2024-25 ನೇ ಸಾಲಿನ ವಕೀಲರ ಸಂಘದ ವಾರ್ಷಿಕ ಸ್ನೇಹ ಮಿಲನ ಕಾರ್ಯಕ್ರಮ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬೆಂಗಳೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಅಮೃತ ಎಸ್.ರಾವ್ ಮಾತನಾಡಿ, ಅತ್ಯುತ್ತಮ ಕಾರ್ಯಕ್ರಮ ಆಯೋಜನೆ ಮಾಡಿದ ಹಾಗೂ ಬಂಟ್ವಾಳ ವಕೀಲರ ಸಂಘದ ವಾರ್ಷಿಕ ಸಾಧನೆಗೆ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ವಕೀಲರು ಕೆಲಸದ ಮೇಲೆ ಪ್ರೀತಿಯಿಟ್ಟು ಕಷ್ಟಪಟ್ಟು ಕಾರ್ಯನಿರ್ವಹಿಸಿದಾಗ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು ಅನೇಕ ಉದಾಹರಣೆಗಳ ಮೂಲಕ ವಾಸ್ತವಿಕ ವಿಚಾರವನ್ನು ತಿಳಿಸಿದರು.
ಹೆತ್ತವರ ಸಹಕಾರ ಮತ್ತು ಸಾಧನೆ ನೀಡಿದ ಪ್ರೋತ್ಸಾಹ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ ಎಂದು ನೆನಪು ಮಾಡಿಕೊಂಡರು. ಜೊತೆಗೆ ಬಂಟ್ವಾಳ ವಕೀಲರ ಸಂಘದ ಒಡನಾಟದ ಬಗ್ಗೆ ಮೆಲುಕು ಹಾಕಿದರು.
ವೃತ್ತಿಯಲ್ಲಿ ಶಿಸ್ತು ಹಾಗೂ ಹಿರಿಯರಿಗೆ ಗೌರವ ನೀಡುವ ಕಾರ್ಯಗಳು ನಡೆಯಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತಾ ಎಮ್. ಅವರು ಮಾತನಾಡಿ, ವಕೀಲರ ಸಂಘದ ಶ್ರೇಯೋಭಿವೃದ್ದಿಗಾಗಿ ಸಮಯವನ್ನು ಮೀಸಲಿಟ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂಬ ನಂಬಿಕೆ ಇದೆ, ಮತ್ತು ವಕೀಲರ ಸಹಕಾರ ಮತ್ತು ಬೆಂಬಲದಿಂದ ಉತ್ತಮ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್ ಸಿ ಬಂಟ್ವಾಳ ಭಾಗ್ಯಮ್ಮ , ಹೆಚ್ಚುವರಿ ಸಿವಿಲ್ ಜಡ್ಹ್, ಮತ್ತು ಜೆ.ಎಮ್.ಎಪ್ ಸಿ ಬಂಟ್ವಾಳ ಕೃಷ್ಣಮೂರ್ತಿ ಎನ್, ಧಾರ್ಮಿಕ ಪರಿಷತ್ ನ್ಯಾಯಾಂಗ ಅಧಿಕಾರಿ, ನಿವೃತ್ತ ನ್ಯಾಯಾಧೀಶ ಎನ್.ಶ್ರೀವತ್ಸ ಕೆದಿಲಾಯ, ನಿವೃತ್ತ ನ್ಯಾಯಾಧೀಶ ಕೆ.ರಾಧಾಕೃಷ್ಣ ,ನಿವೃತ್ತ ನ್ಯಾಯಾಧೀಶ ಹಾಗೂ ಹಿರಿಯ ನ್ಯಾಯವಾದಿಯಾಗಿರುವ ಬಿ.ಗಣೇಶಾನಂದ ಎನ್.ಸೋಮಯಾಜಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ವಕೀಲರ ಸೌಹಾರ್ದ ಸಹಕಾರಿ ಸಂಘ (ರಿ) ಮಂಗಳೂರು ಇದರ ಅಧ್ಯಕ್ಷ ವಿನಯ ಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಕೀಲ ವೃತ್ತಿಜೀವನದ ನಿವೃತ್ತಿಯನ್ನು ಪಡೆದ ನ್ಯಾಯವಾದಿ ಜತ್ತನಕೋಡಿ ಶಂಕರ್ ಭಟ್ ಅವರನ್ನು ಸನ್ಮಾನಿಲಾಯಿತು.ವಕೀಲರ ಕೈಪಿಡಿ ಹಾಗೂ ವಕೀಲರ ಗುರುತಿನ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು.ಚೆಸ್ ನಲ್ಲಿ ಮಾಡಿದ ಸಾಧನೆ ಗುರುತಿಸಿ ವಿದ್ಯಾರ್ಥಿ ದೀನ್ ರಾಮ್ ಶೆಟ್ಟಿ ದಂಡೆ ಅವರನ್ನು ಗುರುತಿಸಿ ಗೌರವಿಸಲಾಯಿತು.
ಎರಡನೇ ಬಾರಿಗೆ ಕ್ಯಾಥೋಲಿಕ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಜೀವನ್ ಲೋಬೋ ಅವರನ್ನು ಸನ್ಮಾನಿಸಲಾಯಿತು.ಸೌಹಾರ್ದ ಸಹಕಾರ ಸಂಘದ ಷೇರು ಬಂಡವಾಳ ಪತ್ರ ಹಾಗೂ ಪಿಗ್ಮಿ ಚೀಟಿಯನ್ನು ವಿತರಿಸಲಾಯಿತು.ಜಯರಾಮ ರೈ ಸ್ವಾಗತಿಸಿ, ಅಭಿನಯ ಚಿದಾನಂದ ಅವರು ಧನ್ಯವಾದ ನೀಡಿದರು.ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಬೈರಿಕಟ್ಟೆ ವಾಚಿಸಿದರು.ವಕೀಲರಾದ ನಿತಿನ್ ಹಾಗೂ ಅಭಿನಯಚಿದಾನಂದ ಅವರು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.