ಮಂಗಳೂರು, ಏ.09(DaijiworldNews/TA): ಕ್ರೀಡಾಳುಗಳ ಆರೋಗ್ಯದ ಸಲಹೆಯನ್ನು ನೀಡುತ್ತಾ ಸದಾ ಸ್ಫೂರ್ತಿಯಾಗಿ ಬೆನ್ನಿಗೆ ನಿಲ್ಲುವವರು ಫಿಸಿಯೋಥೆರಪಿಗಳು. ಆಟಗಾರರ ಸಂಧಿಗ್ದ ಸ್ಥಿತಿಗಳಲ್ಲಿ ಮರಳಿ ಕ್ರೀಡಾ ಕ್ಷೇತ್ರಕ್ಕೆ ಹೋಗುವಂತಹ ಜೀವನ ನೀಡುವ ಫಿಸಿಯೋಥೆರಪಿಗಳ ಸೇವೆ ಸದಾ ಸ್ಮರಣೀಯ ಎಂದು ಇಂಡಿಯಾ ಎ ಟೀಮ್ ಕ್ರಿಕೆಟ್ ಆಟಗಾರ ವಿದ್ವತ್ ಕಾವೇರಪ್ಪ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ ನಿಟ್ಟೆ ಗ್ರೌಂಡ್ಸ್ ನಲ್ಲಿ ಜರಗಿದ ದಕ್ಷಿಣ ಭಾರತ ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ -2025 ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕ್ರಿಕೆಟ್ ಆಟವೆಂದಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ, ಒಗ್ಗಟ್ಟಾಗಿಸಿ ತಂಡವಾಗಿ ಆಡುವ ಸುಂದರ ಕ್ರೀಡೆ. ಫ್ಯಾಷನ್ ಆಗಿ ಬೆಳೆದುಬಂದ ಕ್ರೀಡೆ ಖ್ಯಾತಿಯಿಂದ ಹಲವರಿಗೆ ಇದೀಗ ಜೀವನದ ಹಾದಿಯೂ ಆಗಿದೆ. ಶಿಸ್ತು ಮತ್ತು ಮೌಲ್ಯಗಳನ್ನು ಕಲಿಸುವ ಆಟವಾಗಿ ಕ್ರಿಕೆಟ್ ಹೊರಹೊಮ್ಮಿದ್ದು, ಇದರಲ್ಲಿ ಫಿಸಿಯೋಥೆರಪಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಡಾ. ಎಂ.ಎಸ್ ಮೂಡಿತ್ತಾಯ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕರುಣಾಕರ್ ಶೆಟ್ಟಿ, ಕ್ಷೇಮ ಡೀನ್ ಡಾ. ಸಂದೀಪ್ ರೈ, ಎ.ಬಿ ಶೆಟ್ಟಿ ದಂತ ವಿದ್ಯಾಲಯದ ಡೀನ್ ಡಾ. ಮಿತಾ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕುಲಾಲ್ ಉಪಸ್ಥಿತರಿದ್ದರು.