ಮಂಗಳೂರು, ಏ.12 (DaijiworldNews/AA): ಮುಂಬರುವ ದಿನಗಳಲ್ಲಿ ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್ ಯುನಿವರ್ಸಿಟಿ ಸ್ಥಾಪನೆಗೆ ಸಂಬಂಧಿಸಿ ಯೋಜನಾ ವಿವರವಾದ ವರದಿ(ಡಿಪಿಆರ್)ಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಈ ವರದಿಯನ್ನು ಕೇಂದ್ರ ಶಿಪ್ಪಿಂಗ್ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು.

ನವಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ವತಿಯಿಂದ ಶುಕ್ರವಾರ ಮಂಗಳೂರಿನಲ್ಲಿ ಆಯೋಜಿಸಿದ್ದ 'ಮೆರಿಟೈಮ್ ಅಡ್ವರ್ಸಿಟೀಸ್' ಎಂಬ ವಿಷಯದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರೀಯ ಮೆರಿಟೈಮ್ ಯುನಿವರ್ಸಿಟಿ ಸ್ಥಾಪನಗೆ ಮಂಗಳೂರಿಗಿಂತ ಬೇರೆ ಪ್ರಸಕ್ತ ಜಾಗ ಇಲ್ಲ. ವೀರರಾಣಿ ಅಬ್ಬಕ್ಕ ಹೆಸರಿನಲ್ಲಿ ವಿವಿ ಸ್ಥಾಪನೆಯ ವರದಿಯನ್ನು ಶೀಘ್ರ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಆರ್ಥಿಕತೆಯನ್ನು ಬಲಪಡಿಸಲು ಮಂಗಳೂರಿನಲ್ಲಿ ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಕೈಗಾರಿಕೆಗಳ ಸಾಧ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಬಂದರು ಆಧಾರಿತ ಅಭಿವೃದ್ಧಿಯ ಬಗ್ಗೆ ಒತ್ತು ನೀಡುತ್ತಿದ್ದಾರೆ. ಇತ್ತೀಚಿನ ಕೇಂದ್ರ ಬಜೆಟ್ ದೇಶದ ಸಾಗರ ವಲಯವನ್ನು ಬೆಂಬಲಿಸಲು ಹಡಗು ನಿರ್ಮಾಣ ಕ್ಲಸ್ಟರ್ ಮತ್ತು ಸಾಗರ ಅಭಿವೃದ್ಧಿ ನಿಧಿಯನ್ನು ಘೋಷಿಸಿತು. ಈ ನಿಟ್ಟಿನಲ್ಲಿ ಮಂಗಳೂರು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಬಂದರು ಮತ್ತು ಕಡಲ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಶಿರಾಡಿ ಘಾಟ್ ಮೂಲಕ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಮಾರ್ಗಗಳ ಅಭಿವೃದ್ಧಿಗಾಗಿ ಜಂಟಿಯಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸಲು ಇಲಾಖಾ ಮಟ್ಟದಲ್ಲಿ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.