ಬೆಳ್ತಂಗಡಿ, ಏ.14 (DaijiworldNews/AA): ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ-ಧರ್ಮಸ್ಥಳ ರಸ್ತೆಯ ಕೊಂಬಿನಡ್ಕ ಶಾಲೆ ಸಮೀಪದ ಕೆದಿಹಿತ್ಲುವಿನಲ್ಲಿ ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾದ ಘಟನೆ ಭಾನುವಾರ ಸಂಭವಿಸಿದೆ.

ಧರ್ಮಸ್ಥಳದಿಂದ ಮುಂಡಾಜೆಯತ್ತ ಸಂಚರಿಸುತ್ತಿದ್ದ ಕಾರು ರಸ್ತೆ ಬದಿಯ ಮೋರಿಗೆ ಢಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಎರಡೂ ಕಾರುಗಳಲ್ಲಿ ಇದ್ದವರು ಅಪಾಯದಿಂದ ಪಾರಾಗಿದ್ದಾರೆ.
ಒಂದು ವೇಳೆ ಕಾರು ಮೋರಿಯಲ್ಲಿ ಸಿಲುಕಿಕೊಳ್ಳದಿದ್ದರೆ ಕೆಳಗಡೆ ಹರಿಯುವ ಹಳ್ಳಕ್ಕೆ ಬೀಳುತ್ತಿತ್ತು. ಇದರಿಂದ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಸುಮಾರು ೬ ಕಡೆ ಅಗಲ ಕಿರಿದಾದ ಕಿರು ಸೇತುವೆಗಳಿದ್ದು, ಇವು ಅಪಾಯಕಾರಿಯಾಗಿವೆ. ಇದು ಆಗಾಗ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಅಪಘಾತಗಳನ್ನು ತಡೆಗಟ್ಟಲು ಕಿರಿದಾದ ಭಾಗಗಳನ್ನು ಅಗಲಗೊಳಿಸಿ ಸರಿಯಾದ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕೆಂದು ಈ ಪ್ರದೇಶದ ಜನರು ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.