ಮಂಗಳೂರು, ಏ.16 (DaijiworldNews/AA): ವಕ್ಫ್ ಆಸ್ತಿ ಮತ್ತು ವಕ್ಫ್ ಮಂಡಳಿ ಬಗ್ಗೆ ಸಾರ್ವಜನಿಕವಾಗಿ ಹಲವಾರು ಸುಳ್ಳು ಸುದ್ದಿಗಳನ್ನು ಹರಡಿಸಲಾಗಿದೆ ಎಂದು ದ.ಕ. ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿರಾಜ್ ಬಜಪೆ ತಿಳಿಸಿದ್ದಾರೆ.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ನಡೆಯುವ ಪ್ರತಿಭಟನೆಗೆ ದ.ಕ. ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಸಂಪೂರ್ಣ ಬೆಂಬಲ ನೀಡಿ, ಕಾಯಿದೆ ಬಗ್ಗೆ ಮುಸ್ಲಿಮೇತರರ ಮಧ್ಯೆ ಇರುವ ಗೊಂದಲ ನಿವಾರಿಸಲಿದೆ. ಕಾಯಿದೆ ವಿರುದ್ಧ ಏ.18ರ ಉಲಮಾಗಳ ಪ್ರತಿಭಟನೆ ಮತ್ತು ಏ.29ರ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರತಿಭಟನೆಗೆ ಜಿಲ್ಲೆಯ ಎಲ್ಲ ಮುಸ್ಲಿಂ ಜನಪ್ರಧಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ವಕ್ಫ್ ಭೂಮಿ ಅಂತ ಒಂದು ಜಾಗದಲ್ಲಿ ನಿಂತು ಹೇಳಿದಾಕ್ಷಣ ಅದು ವಕ್ಫ್ ಆಗುತ್ತದೆ ಎಂದೂ, ವಕ್ಫ್ ಮಂಡಳಿ ಹಿಂದೂಗಳ ಭೂಮಿ ಕಬಳಿಸಿ ಮುಸ್ಲಿಮರಿಗೆ ಖಾತೆ ಮಾಡಿಸುವ ಸಂಸ್ಥೆ ಎಂದು ಸುಳ್ಳು ಸುದ್ದಿ ಹರಡಿಸುವ ವಿರುದ್ಧ ಜನರಿಗೆ ಸತ್ಯ ಮನವರಿಕೆ ಮಾಡಲಾಗುವುದು. ಮುಸ್ಲಿಮರ ಹಕ್ಕುಗಳನ್ನು ಹತ್ತಿಕ್ಕುವುದರೊಂದಿಗೆ, ಬಂಡವಾಳಶಾಹಿಗಳ ಅಧೀನದಲ್ಲಿರುವ ಜಮೀನು ರಕ್ಷಣೆ ಮಾಡುವ ಉದ್ದೇಶಕ್ಕಾಗಿ ಮೋದಿ ಸರ್ಕಾರ ಕಾಯಿದೆ ಜಾರಿಗೆ ತಂದಿರುವುದು ಆತಂಕಕಾರಿಯಾಗಿದೆ ಎಂದು ಹೇಳಿದರು.
ಧರ್ಮದ ಆಧಾರದ ಮೇಲೆ ಈ ದೇಶದಲ್ಲಿ ಸೌಹಾರ್ದತೆ ಇರುವ ಹಿಂದೂ - ಮುಸ್ಲಿಮರನ್ನು ಎತ್ತಿಕಟ್ಟಿ ಅಧಿಕಾರ ಲಾಭ ಪಡೆಯುವ ಬಿಜೆಪಿ ಸರ್ಕಾರದ ಬಣ್ಣ ಕೆಲವೇ ದಿನಗಳಲ್ಲಿ ಬಯಲಾಗಲಿದೆ. ದೇಶದ ಎಲ್ಲ ಜಾತ್ಯತೀತ ಪಕ್ಷಗಳು ವಕ್ಫ್ ಮಸೂದೆ ಖಂಡಿಸಿರುವುದಕ್ಕೆ ನಾವು ಅಭಿನಂದಿಸುತ್ತೇವೆ. ಕೆಲವು ನಕಲಿ ಜಾತ್ಯತೀತ ಪಕ್ಷಗಳು ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಪಡೆದು, ತನ್ನ ಅಧಿಕಾರದ ಆಸೆಗಾಗಿ ಜಾತ್ಯತೀತ ತತ್ವವನ್ನು ಹಣ ಮತ್ತು ಅಧಿಕಾರದ ಆಸೆಗಾಗಿ ಕೋಮು ಪಕ್ಷದೊಂದಿಗೆ ಸೇರಿಕೊಂಡಿರುವುದನ್ನು ಖಂಡಿಸುವುದರೊಂದಿಗೆ, ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಈ ದೇಶದ ಮತದಾರರು ಕಲಿಸಲಿದ್ದಾರೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಜಿಪ, ಸದಸ್ಯರಾದ ಅಬ್ದುಲ್ ಸಲಾಂ ಸೋಮೇಶ್ವರ, ಎ.ಕೆ. ಅಬ್ದುಲ್ ಸತ್ತಾರ್, ಅಬ್ದುಲ್ ರಝಾಕ್ ಭಾಗವಹಿಸಿದ್ದರು.