ಉಡುಪಿ, ಏ.16 (DaijiworldNews/AA): ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿರುವ ಪಾದಚಾರಿ ಮೇಲ್ಸೇತುವೆಗೆ ಸೂಕ್ತವಾದ ಮೇಲ್ಛಾವಣಿಯ ಹೊದಿಕೆಯಿಲ್ಲ. ಇದರಿಂದಾಗಿ ಪ್ರಯಾಣಿಕರು ಸುಡುವ ಬಿಸಿಲು ಮತ್ತು ಭಾರೀ ಮಳೆ ಬಂದಾಗ ಪರದಾಡುವಂತಾಗುತ್ತದೆ. ಹೀಗಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸದಸ್ಯರಾದ ನಿತ್ಯಾನಂದ ಒಳಕಾಡು, ಕೆ. ಬಾಲಗಂಗಾಧರ ರಾವ್ ಮತ್ತು ತಾರಾನಾಥ್ ಮೇಸ್ತ ಶಿರೂರು ಅವರು ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳು ಮತ್ತು ರೈಲ್ವೆ ಅಧಿಕಾರಿಗಳನ್ನು ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಸೇತುವೆಯ ಮೇಲೆ ಮೇಲ್ಛಾವಣಿಯನ್ನು ಅಳವಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


ಇಂದ್ರಾಳಿ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯನ್ನು ಪ್ರತಿದಿನ ಸಾವಿರಾರು ಪ್ರಯಾಣಿಕರು ಬಳಸುತ್ತಾರೆ. ಮೇಲ್ಛಾವಣಿ ಇಲ್ಲದೆ, ಪ್ರಯಾಣಿಕರು ತೀವ್ರ ಬಿಸಿಲಿನಲ್ಲಿ ನಡೆಯಬೇಕಾಗುತ್ತದೆ ಹಾಗೂ ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯುವಂತಾಗುತ್ತದೆ. ಕೆಲವೊಮ್ಮೆ, ಕಾರ್ಯಾಚರಣೆಯ ಅಗತ್ಯತೆಗಳ ಕಾರಣದಿಂದಾಗಿ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಬದಲಾವಣೆಯಾದಾಗ, ಪ್ರಯಾಣಿಕರು ನಿಲ್ದಾಣ ನಿಯಂತ್ರಕರ ಸೂಚನೆಗಳ ಆಧಾರದ ಮೇಲೆ ಪ್ಲಾಟ್ಫಾರ್ಮ್ಗಳನ್ನು ಬದಲಾಯಿಸಬೇಕಾಗುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗುತ್ತದೆ. ಏಕೆಂದರೆ ಜನರು ತೀವ್ರ ಬಿಸಿಲು ಅಥವಾ ಮಳೆ ಇದ್ದಾಗ ಅದೇ ಮೇಲ್ಛಾವಣಿ ಇಲ್ಲದ ಸೇತುವೆಯನ್ನೇ ಬಳಸಬೇಕಾಗುತ್ತದೆ.
ಚಿಕ್ಕ ಮಕ್ಕಳಿರುವ ತಾಯಂದಿರು ಮತ್ತು ನಡೆದಾಡಲು ಕಷ್ಟಪಡುವ ವೃದ್ಧ ಪ್ರಯಾಣಿಕರು ವಿಶೇಷವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಸೇತುವೆಯ ಮೇಲೆ ಸಂಚರಿಸುವಾಗ ಸಂಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಎಲ್ಲಾ ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಕಾಲುದಾರಿಗೆ ಮೇಲ್ಛಾವಣಿಯನ್ನು ಅಳವಡಿಸುವ ಅಗತ್ಯವಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.