ಮಂಗಳೂರು, ಏ.18(DaijiworldNews/TA): ದೀರ್ಘಕಾಲ ಮುಂಬೈಯಲ್ಲಿದ್ದು ಕನ್ನಡದ ಉಳಿವು, ಬೆಳವಣಿಗೆಗೆ ಶ್ರಮಿಸಿದ ರಾಮಚಂದ್ರ ಉಚ್ಚಿಲ್ ರ ಜನ್ಮ ಶತಮಾನೋತ್ಸವದ ನೆನಪಿಗಾಗಿ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಮಿತಿ, ಮಂಗಳೂರು ಗುರುಶಿಷ್ಯ ಒಕ್ಕೂಟ, ಚ.ರಾ. ಪ್ರಕಾಶನ, ಮುಂಬೈ ವತಿಯಿಂದ ಎ.20ರಂದು ಅಪರಾಹ್ನ 2:30ರಿಂದ ಚ.ರಾ ನೆನಪಿನ ನಾಲ್ಕು ಸಂಪುಟಗಳ ಸಂಚಯ ಸೇರಿದಂತೆ 8 ಕೃತಿಗಳು ಅವರ ಹುಟ್ಟೂರು ಉಚ್ಚಿಲದಲ್ಲಿ ಲೋಕಾರ್ಪಣೆಗೊಳ್ಳಲಿವೆ ಎಂದು ಸಲಹಾ ಸಮಿತಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಸ್ಮಾರಕ ಕಟ್ಟಡದ ಸಭಾಗೃಹದಲ್ಲಿ ಸಮಾರಂಭ ನಡೆಯಲಿದೆ, ಉಚ್ಚಿಲ್ ಪುತ್ರಿ ಡಾ.ವಾಣಿ ಎನ್. ಉಚ್ಚಿಲ್ಕರ್ ಅವರ ಮೂರು ಕೃತಿಗಳು ಹಾಗೂ ಇನ್ನೊಂದು ಸಂಪಾದಿತ ಕೃತಿ ಹಾಗೆ ಒಟ್ಟು 8 ಕೃತಿಗಳು ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 2.30ರಿಂದ 'ಕರ್ಣ ಪರ್ವ' ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಬಳಿಕ ಸಂಜೆ 5ಕ್ಕೆ ನಡೆಯಲಿರುವ ಸಮಾರಂಭದ ಉದ್ಘಾಟನೆಯನ್ನು ಸಾಹಿತಿ, ವೈದ್ಯ ಡಾ.ರಮಾನಂದ ಬನಾರಿ ನೆರವೇರಿಸುವರು.
ಸಂಶೋಧಕ, ಸಾಹಿತಿ ಡಾ.ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಚ.ರಾ ಸಂಸ್ಕರಣೆ ನಡೆಸಿಕೊಡಲಿದ್ದಾರೆ. ಅತಿಥಿಗಳಾಗಿ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ನಂದಳಿಕೆ ಬಾಲಚಂದ್ರ ರಾವ್, ಯಕ್ಷರಂಗ ಉಡುಪಿಯ ಮುರಳಿ ಕಡೆಕಾರ್, ಪ್ರಕಾಶಕ ಕಲ್ಲೂರು ನಾಗೇಶ್ ಪಾಲ್ಗೊಳ್ಳುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಲೇಖಕಿ ಹಾಗೂ ಸಂಪಾದಕಿ ಡಾ.ವಾಣಿ ಎನ್. ಉಚ್ಚಿಲ್ಕರ್, ಕಲ್ಲೂರು ನಾಗೇಶ್, ನವನೀತ್ ನಾರಾಯಣ ಉಚ್ಚಿಲ್ಕರ್, ನಿಧೀಶ್ ನವೀನ್ ಉಚ್ಚಿಲ್ಕರ್ ಉಪಸ್ಥಿತರಿದ್ದರು.