ಉಡುಪಿ, ಮೇ. 05 (DaijiworldNews/AK):ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ಭೀಕರ ದಾಳಿಯಲ್ಲಿ ಮೃತಪಟ್ಟ 26 ಮಂದಿಯ ಕುಟುಂಬದ ಪರವಾಗಿ 26 ಯುವಕರಿಂದ ತರ್ಪಣ ಕಾರ್ಯ ಉಡುಪಿಯ ಕಡಲ ತೀರದಲ್ಲಿ ನಡೆಯಿತು.


ಇಲ್ಲಿನ ಹನುಮಾನ್ ವಿಠೋಭ ರುಕುಮಾಯಿ ಮಂದಿರದ ಕಡಲತೀರದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಲು ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಗೀತಾ ತ್ರಿಷ್ಟುಪ್ ಹೋಮ ನೆರವೇರಿಸಿ ಪೂರ್ಣಾಹುತಿ ನಡೆಯಿತು.
ಈ ವೇಳೆ ಮಾತನಾಡಿದ ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಲು ತಂತ್ರಿ, ಅಭಿನವ ಭಾರತ ಸೊಸೈಟಿ ಸಂಘಟನೆ ವತಿಯಿಂದ ಈ ಕಾರ್ಯವನ್ನು ಆಯೋಜನೆ ಮಾಡಲಾಗಿದೆ. ಈ ವೇಳೆ ಪವಿತ್ರ ಮಂತ್ರಗಳ ಸಹಸ್ರ ಪಠಣ ನಡೆದಿದೆ. ಮೃತ ಹಿಂದೂ ಕುಟುಂಬಗಳ ಜೊತೆ ಹಿಂದೂ ಸಮಾಜ ನಿಂತಿದೆ. ಆತ್ಮಗಳ ಸದ್ಗತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದ್ದೇವೆ. ಕುಟುಂಬದ ನೋವು ಸಹಿಸುವ ಶಕ್ತಿಗಾಗಿ ಸಮಾಜ ಪ್ರಾರ್ಥಿಸಿದ್ದು, ಪವಿತ್ರ ನದಿಗಳ ಸಂಗಮ ಸಮುದ್ರದಲ್ಲಿ ಹೋಮಗಳನ್ನು ನೆರವೇರಿಸಲಾಗಿದೆ ಎಂದು ತಿಳಿಸಿದರು.