ಕಾರ್ಕಳ, ಮೇ. 10 (DaijiworldNews/AA): ಪಾಕಿಸ್ತಾನ ಮೂಲದ ಸಂಖ್ಯೆಯಿಂದ ಕಾರ್ಕಳದ ಯುವಕನೋರ್ವನಿಗೆ ಶನಿವಾರ ಅನುಮಾನಾಸ್ಪದ ವಾಟ್ಸಾಪ್ ಸಂದೇಶ ಬಂದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ತಕ್ಷಣವೇ ಆತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ "ಅಂತರಾಷ್ಟ್ರೀಯ ಸಂಖ್ಯೆಗಳಿಂದ ಬರುವ ಅನುಮಾನಾಸ್ಪದ ಸಂದೇಶಗಳು ಅಥವಾ ಲಿಂಕ್ಗಳಿಗೆ ಪ್ರತಿಕ್ರಿಯಿಸಬೇಡಿ. ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿ ಅಥವಾ ಒಟಿಪಿಗಳನ್ನು ಹಂಚಿಕೊಳ್ಳಬೇಡಿ" ಎಂದು ಉಡುಪಿ ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸಂಭಾವ್ಯ ಸೈಬರ್ ಬೆದರಿಕೆಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಇಂತಹ ಯಾವುದೇ ಘಟನೆಗಳು ಕಂಡುಬಂದಲ್ಲಿ ತಕ್ಷಣವೇ ವರದಿ ಮಾಡುವಂತೆ ಕೋರಿದ್ದಾರೆ.
ತುರ್ತು ಪರಿಸ್ಥಿತಿಗಳು ಅಥವಾ ಸೈಬರ್ ಅಪರಾಧಗಳ ಕುರಿತು ದೂರು ನೀಡಲು 1930 ಗೆ ಕರೆ ಮಾಡಿ, www.cybercrime.gov.in ಗೆ ಭೇಟಿ ನೀಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.