ಉಡುಪಿ, ಮೇ. 11 (DaijiworldNews/AA): ಭಾರತೀಯ ಕ್ಯಾಥೊಲಿಕ್ ಬಿಷಪ್ಗಳ ಸಮ್ಮೇಳನದ (ಸಿಸಿಬಿಐ) ನಿರ್ದೇಶನದಂತೆ, ಉಡುಪಿ ಧರ್ಮಪ್ರಾಂತ್ಯದಾದ್ಯಂತದ ಚರ್ಚ್ಗಳಲ್ಲಿ ಭಾನುವಾರ ಭಾರತೀಯ ಸೇನೆ ಮತ್ತು ಅದರ ಸೈನಿಕರ ರಕ್ಷಣೆಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.



ಪ್ರತಿ ಚರ್ಚ್ನ ಭಾನುವಾರದ ದಿವ್ಯ ಬಲಿ ಪೂಜೆಯ ಸಂದರ್ಭದಲ್ಲಿ, ಗಡಿಗಳಲ್ಲಿ ರಾಷ್ಟ್ರವನ್ನು ಕಾಯುತ್ತಿರುವ ಸೈನಿಕರ ಯೋಗಕ್ಷೇಮಕ್ಕಾಗಿ ಪಾದ್ರಿಗಳು ಪ್ರಾರ್ಥನೆ ಸಲ್ಲಿಸಿದರು. ಈ ಪ್ರಾರ್ಥನೆಗಳೊಂದಿಗೆ ಪವಿತ್ರ ಬಲಿ ಪೂಜೆಯ ವಿಶೇಷ ಆರಾಧನೆಯೂ ಇತ್ತು.
ಕಾರ್ಕಳ ತಾಲೂಕಿನ ಬೆಳ್ಮಣ್ನಲ್ಲಿರುವ ಸಂತ ಜೋಸೆಫ್ ಚರ್ಚ್ನಲ್ಲಿ ನಡೆದ ವಿಶೇಷ ಪ್ರಾರ್ಥನೆ ಸೇವೆಯ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ವಹಿಸಿದ್ದರು. ಹೊಸದಾಗಿ ಆಯ್ಕೆಯಾದ ಕ್ಯಾಥೋಲಿಕ್ ಧರ್ಮಗುರು ಪೋಪ್ ಲಿಯೋ XIV ಅವರ ಆಧ್ಯಾತ್ಮಿಕ ನಾಯಕತ್ವದಲ್ಲಿ ದೈವಿಕ ಮಾರ್ಗದರ್ಶನ ಸಿಗಲಿ ಎಂದು ಅವರು ಪ್ರಾರ್ಥನೆ ಸಲ್ಲಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಷಪ್ ಲೋಬೊ ಅವರು, ಜಾಗತಿಕ ಕ್ರೈಸ್ತ ಸಮುದಾಯವು ಹಬ್ಬವನ್ನು ಆಚರಿಸುತ್ತಿದೆ. ಪೋಪ್ ಲಿಯೋ XIV ರ ಆಯ್ಕೆಯು ಜಗತ್ತಿಗೆ ಭರವಸೆ ಮತ್ತು ಶಾಂತಿಯ ಸಂಕೇತವಾಗಿದೆ ಎಂದರು. ಭಾರತ-ಪಾಕಿಸ್ತಾನ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಉಲ್ಲೇಖಿಸಿದ ಬಿಷಪ್ ಅವರು, ಭಾರತೀಯ ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರಾಷ್ಟ್ರೀಯ ಭದ್ರತೆಗೆ ತೋರುತ್ತಿರುವ ಅಚಲ ಬದ್ಧತೆಯನ್ನು ಶ್ಲಾಘಿಸಿದರು. ಈ ಧೀರ ಸೈನಿಕರಿಗಾಗಿ ನಿರಂತರ ಪ್ರಾರ್ಥನೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಹೊಸ ಪೋಪ್ ಅವರು ಸಂವಾದ ಮತ್ತು ಪರಸ್ಪರ ತಿಳುವಳಿಕೆಯ ಮೂಲಕ ಜಾಗತಿಕ ಶಾಂತಿಗೆ ಕರೆ ನೀಡಿದ್ದಾರೆ. ಎಲ್ಲರೂ ಸಹೋದರ ಸಹೋದರಿಯರಂತೆ ಬದುಕಲು ಪ್ರೋತ್ಸಾಹಿಸುತ್ತಿದ್ದಾರೆ ಎಂದ ಅವರು, ಭಾರತದಲ್ಲಿಯೂ ಶಾಂತಿ ನೆಲೆಸುತ್ತದೆ ಮತ್ತು ಯುದ್ಧದ ನೆರಳು ದೂರವಾಗುತ್ತದೆ ಎಂದು ಆಶಿಸಿದರು. ಎರಡೂ ರಾಷ್ಟ್ರಗಳು ಹಿಂಸೆಯ ಮಾರ್ಗವನ್ನು ತ್ಯಜಿಸಿ ಶಾಂತಿ ಸ್ಥಾಪನೆಗೆ ಶ್ರಮಿಸಬೇಕು ಎಂದು ಒತ್ತಾಯಿಸಿದರು. ಸೈನಿಕರ ಕರ್ತವ್ಯಗಳಿಗೆ ಸಾರ್ವಜನಿಕರ ಬೆಂಬಲವು ಉತ್ಸಾಹ ನೀಡುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಬೆಳ್ಮಣ್ ಚರ್ಚ್ನ ಪ್ಯಾರಿಷ್ ಪಾದ್ರಿ ಫಾ. ಫ್ರೆಡ್ ಮಸ್ಕರೇನ್ಹಸ್, ಸಹಾಯಕ ಪಾದ್ರಿ ಫಾ. ಅರ್ನಾಲ್ಡ್ ಮಥಾಯಸ್ ಮತ್ತು ಕಾರ್ಕಳದ ಕ್ರೈಸ್ಟ್ ದಿ ಕಿಂಗ್ ಚರ್ಚ್ನ ಪ್ಯಾರಿಷ್ ಪಾದ್ರಿ ಫಾ. ಕ್ಲೆಮೆಂಟ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.