ಕಾಸರಗೋಡು, ಮೇ. 12 (DaijiworldNews/AK): ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ವೇಳೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಮಣ್ಣಿನಡಿಗೆ ಸಿಲುಕಿದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದ ಘಟನೆ ಇಂದು ಬೆಳಗ್ಗೆ ಚೆರ್ವತ್ತೂರು ಎಂಬಲ್ಲಿ ನಡೆದಿದೆ.



ಘಟನೆಯಲ್ಲಿ ಮಣ್ಣಿನಡಿಯಲ್ಲಿ ನಾಲ್ವರು ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹರಸಾಹಸ ಪಟ್ಟು ನಾಲ್ವರನ್ನು ಹೊರತೆಗೆದಿದ್ದಾರೆ. ಈ ಪೈಕಿ ಓರ್ವ ಮೃತಪಟ್ಟಿದ್ದಾರೆ. ಎಲ್ಲ ಕಾರ್ಮಿಕರು ಪಶ್ಚಿಮ ಬಂಗಾಳ ಮೂಲದವರು ಎನ್ನಲಾಗಿದೆ.
ಇಂದು ಬೆಳಗ್ಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ರಸ್ತೆ ಬದಿಯ ಗುಡ್ಡವು ಕುಸಿದು ಬಿದ್ದಿದೆ. ಇದರಿಂದ ನಾಲ್ವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದರು. ಗಾಯಗೊಂಡ ಕಾರ್ಮಿಕರನ್ನು ಚೆರ್ವತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರನ್ನು ಪಶ್ಚಿಮ ಬಂಗಾಳ ದ ಮುಮ್ತಾಜ್ ಮೀರ್ (18) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಮುನಾಲ್ ಲಸ್ಕರ್ (55) ಮತ್ತು ಮೆಹಾನ್ ತೇಜರ್ (18) ಗಾಯಗೊಂಡಿದ್ದು, ಚೆರ್ವ ತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಕಣ್ಣೂರು ಸರಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ಹರಸಾಹಸ ಪಟ್ಟು ಗಂಟೆಗಳ ಬಳಿಕ ಮೂವರನ್ನು ಹೊರತೆಗೆಯಲಾಯಿತಾದರೂ ಘಟನೆ ನಡೆಯುವ ಸಂದರ್ಭದಲ್ಲಿ ಹಲವಾರು ಕಾರ್ಮಿಕರು ಸ್ಥಳದಲ್ಲಿ ಇದ್ದರು. ಆದರೆ ಸ್ವಲ್ಪದರಲ್ಲೇ ಇವರು ಅಪಾಯದಿಂದ ಪಾರಾಗಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎ. ಕೆ ಶಶೀಂದ್ರನ್ ಪೊಲೀಸರಿಗೆ ಆದೇಶ ನೀಡಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನಾ ನಿರ್ದೇಶಕ ಉಮೇಶ್ ಘರ್ ಸ್ಥಳಕ್ಕೆ ಭೇಟಿ ನೀಡಿ ಅವಲೋಕನಾ ನಡೆಸಿದ್ದಾರೆ.