ಮಂಗಳೂರು, ಮೇ. 18 (DaijiworldNews/AA): ಬ್ರಾಹ್ಮಣ ಸಮಾಜ (ರಿ.) ಟ್ರಸ್ಟ್ ಮತ್ತು ಕಾರ್ಯಕಾರಿ ಹಾಗೂ ಶಿವಳ್ಳಿ ಸ್ಪಂದನ ಕಟೀಲು ವಲಯದ ಸಹಬಾಗಿತ್ವ ದಲ್ಲಿ ನಡೆದ 15 ದಿನಗಳ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭವು ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ಗುರು ರವೀಂದ್ರ ಭಟ್ ಅತ್ತೂರು ಅವರು, "ನಮ್ಮ ಭಾರತ ದೇಶವು ಪ್ರತೀ 100 ಕಿ.ಮೀ. ಗಳಿಗೆ ತನ್ನ ಪ್ರಕೃತಿ ಮತ್ತು ಸಂಸ್ಕಾರವನ್ನು ಬದಲಿಸುತ್ತದೆ. ಇದೇ ನಮ್ಮ ವೈಶಿಷ್ಟ್ಯ ಮತ್ತು ಅದನ್ನು ನಾವು ಉಳಿಸಿಕೊಳ್ಳಬೇಕು. ಅದಕ್ಕಾಗಿ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಆದ್ಯ ಕರ್ತವ್ಯ ಆಗಬೇಕು" ಎಂದರು.
ಸಾಮಾಜಿಕ ಕಾರ್ಯಕರ್ತ ಪಾರ್ಥ ಸಾರಥಿ ಪಂಜ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಕಥಾ ಪುಂಜಗಳ ಮೂಲಕ ತಮ್ಮ ಪ್ರವಚನದಲ್ಲಿ ಮಕ್ಕಳ ಮನಸ್ಸನ್ನು ಗೆದ್ದರು.
ಧಾರ್ಮಿಕ ಪರಿಷತ್ ಸದಸ್ಯ ಕೊರಿಯರ್ ಸುಬ್ರಮಣ್ಯ ಪ್ರಸಾದ್ ಮಾತನಾಡಿ, ಭಾರತದಲ್ಲಿ ವೇದ, ಸಂಸ್ಕೃತಿ ಉಳಿದದ್ದು ಯಾವುದೇ ಸರ್ಕಾರದ ಕ್ರಮಗಳಿಂದಲ್ಲ, ಬದಲಾಗಿ ಋಷಿ ಮುನಿಗಳ ಸಾಧನೆ ಮತ್ತು ಅದನ್ನು ಶ್ರದ್ದೆಯಿಂದ ಕಲಿತು ಮುಂದಿನ ಜನಾಂಗಕ್ಕೆ ಕಲಿಸಿದ ಗುರುಗಳಿಂದ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಜ್ಯೋತಿಷ್ಯ ರತ್ನ ವಿಶ್ವನಾಥ್ ಭಟ್, ಎಸ್ ಕೊಡಿ ಮಾತನಾಡಿ, "ಜನರು ಸರಿಯಾದ ಮಾರ್ಗದಲ್ಲಿ ನಡೆಯಲು ಸಂಸ್ಕಾರ ಅಗತ್ಯ ಮತ್ತು ದಿನಚರಿಯಲ್ಲಿ ಸಂಧ್ಯಾವಂದನೆ, ಭಜನೆ ಹಾಗೂ ವಿವಿಧ ಸ್ತೋತ್ರ ಗಳ ಪಠಣ ಕಡ್ಡಾಯವಾಗಬೇಕು ಎಂದರು.
ವೇದಮೂರ್ತಿ ವಿದ್ವಾನ್ ಅಂಗಡಿಮಾರ್ ವಿಶ್ವೇಶ ಭಟ್ ಆಶೀರ್ವಚನ ನೀಡಿದರು. ಮಳೆಗಾಲಕ್ಕೆ ಬೇಕಾಗುವ ಛತ್ರಿಯನ್ನು ಎಲ್ಲಾ ಶಿಬಿರಾರ್ಥಿಗಳಿಗೆ ಕೊಡು ಶ್ರೀನಿವಾಸ್ ಭಟ್ ವಿತರಿಸಿದರು. ಭಗವತ್ ಗೀತೆ ಪುಸ್ತಕವನ್ನು ದೇವಿಕಾ ರಾವ್ ಪಡುಬಿದ್ರೆ ಮಕ್ಕಳಿಗೆ ವಿತರಿಸಿದರು.
ಶಿ. ಶಿವಳ್ಳಿ ಸ್ಪಂದನ ಮಂಗಳೂರು ತಾಲೂಕು ಖಜಾಂಚಿ ರಘುರಾಮ್ ಭಟ್ ಉಪಸ್ಥಿತರಿದ್ದರು.
ಸುರಗಿರಿ ದೇವಸ್ಥಾನದ ಆಡಳಿತ ಮೊಕ್ತೇಸರ ಅರವಿಂದ ಭಟ್ ಕುದುಕೊಳ್ಳಿ ಸ್ವಾಗತಿಸಿದರು. ಡಾ. ಗುರುರಾಜ ಉಡುಪ ಕಿಲೆಂಜೂರು ವಂದಿಸಿದರು. ಸದಸ್ಯರುಗಳಾದ ಸುರೇಶ್ ರಾಜ್ ಭಟ್ ಕೊಡು, ಭರತ್ ರಾವ್ ಪಕ್ಷಿಕೆರೆ, ಸುಧೀಂದ್ರ ಉಡುಪ ಮಾಡ, ಸುಧೀಂದ್ರ ಉಡುಪ ಬೈಲು ಕಾರ್ಯಕ್ರಮ ಆಯೋಜಿಸಿದರು. ವೈಭವ್ ಭಟ್ ಉರ್ಮಿ ನಿರೂಪಿಸಿದರು.
ಆಚಾರ್ಯರರುಗಳಾದ ಕೆರೆ ವಾಸುದೇವ ಉಡುಪ, ರವೀಂದ್ರ ಭಟ್ ಅತ್ತೂರು, ಅನಂತ ಭಟ್ ಕುಳ್ಳಂಗಲ್, ಸುರೇಶ್ ರಾಜ್ ರಾವ್ ಶರಣ, ಬೈಲು ನಾರಾಯಣ ಉಡುಪ ಅವರಿಗೆ ವಿದ್ಯಾರ್ಥಿಗಳು ಹಣ್ಣು ಹಂಪಲು ಗಳನ್ನು ನೀಡಿ ಗುರುವಂದನೆ ಸಲ್ಲಿಸಿ ಅವರ ಆಶೀರ್ವಾದ ಪಡೆದರು.
ಮುಂದಿನ ಪ್ರತೀ ಆದಿತ್ಯವಾರ ದೇವಸ್ಥಾನದಲ್ಲಿ ಬೆಳಗ್ಗೆ 6.30ಕ್ಕೆ ಸೇರಿ ಕಲಿತ ಸ್ತೋತ್ರ ಪಠಿಸುತ್ತೇವೆ ಎಂದು ಗುರುಗಳಿಗೆ ಶಿಬಿರಾರ್ಥಿಗಳು ವಾಗ್ದಾನ ಮಾಡಿದರು.