ಮಂಗಳೂರು, ಮೇ. 19 (DaijiworldNews/AK): ಇತಿಹಾಸ ಪ್ರಸಿದ್ಧ ಉಳ್ಳಾಲ ಹಝ್ರತ್ ಸಯ್ಯದ್ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಉರುಸ್ ಸಮಾಪನಗೊಂಡಿತು.


ಕೊನೆಯ ದಿನ ನಡೆದ ಅನ್ನದಾನ ಸೇವೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದು ಸ್ವಯಂಸೇವಕರ ಶ್ರಮಕ್ಕೆ ದರ್ಗಾ ಸಮಿತಿ ಅಭಿನಂದನೆ ಸಲ್ಲಿಸಿದೆ. ಉರುಸ್ ನ ಆರಂಭದಿಂದ ಅಂತ್ಯದವರೆಗೂ ಸ್ಪೀಕರ್ ಯು.ಟಿ.ಖಾದರ್ ವಹಿಸಿದ್ದ ವಿಶೇಷ ಮುತುವರ್ಜಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ 2020ಕ್ಕೆ ನಡೆಯಬೇಕಿದ್ದ ಉರುಸ್ 2022ಕ್ಕೆ ನಡೆದಿದ್ದು, ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯದಂತೆ 2025ರಲ್ಲೇ ನಡೆಸಲಾಗಿದೆ. ಅಂದರೆ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಉರುಸ್ ಈ ಬಾರಿ ಮೂರು ವರ್ಷದಲ್ಲೇ ನಡೆದಿತ್ತು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಸ್ಥಳೀಯ ಶಾಸಕ ಯು.ಟಿ.ಖಾದರ್ ವಿಧಾನಸಭೆಯ ಸ್ಪೀಕರ್ ಆಗಿರುವುದರಿಂದ ದರ್ಗಾಕ್ಕೆ ಮೂರು ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದರು.
ಅಲ್ಲದೆ ಉರುಸ್ ಘೋಷಣೆಯಾದ ದಿನದಿಂದ ಕೊನೆಯವರೆಗೂ ವಿಶೇಷ ಮುತುವರ್ಜಿ ವಹಿಸಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಾತ್ರವಲ್ಲದೆ ಸಚಿವರುಗಳೂ ದರ್ಗಾಕ್ಕೆ ಬರುವಂತೆ ಮಾಡುವಲ್ಲಿಯೂ ಸಫಲರಾಗಿದ್ದರು. ಕೊನೆಯ ದಿನ ದರ್ಗಾ ವಠಾರ ಜನಸ್ತೋಮಕ್ಕೆ ಸಾಕ್ಷಿಯಾಗಿತ್ತು. ಶನಿವಾರ ರಾತ್ರಿ 7 ಗಂಟೆ ಸಂದಲ್ ಮೆರವಣಿಗೆಯ ಮೂಲಕ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಲಾಗಿತ್ತು.
8 ಗಂಟೆಯಿಂದ ಅನ್ನದಾನ ಸೇವೆ ಆರಂಭಿಸಲಾಗಿದ್ದು, ಲಕ್ಷಾಂತರ ಮಂದಿ ರಾತ್ರಿಯಿಂದಲೇ ಆಗಮಿಸಿದ್ದರು. ಈ ನಡುವೆ ಮಳೆಯ ಸಿಂಚನವೂ ಆಯಿತು. ಸ್ಪೀಕರ್ ಯು.ಟಿ.ಖಾದರ್, ನಸುಕಿನ ಜಾವ 4 ಗಂಟೆಯವರೆಗೆ ದರ್ಗಾದಲ್ಲೇ ಇದ್ದು, ಅನ್ನದಾನ ಸೇವೆಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್, ಕಳೆದ ಉರುಸ್ ಗಿಂತ ಈ ಉರುಸ್ ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು ನಿರೀಕ್ಷೆಗೂ ಮೀರಿದ ಜನಸಂದಣಿ ಕಂಡುಬಂದಿದೆ. ದೇಶದಲ್ಲೇ ಅತಿದೊಡ್ಡ ಅನ್ನದಾನ ಸೇವೆ ಎನ್ನುವ ಹೆಗ್ಗಳಿಕೆಗೂ ಉಳ್ಳಾಲ ಉರುಸ್ ಪಾತ್ರವಾಗಿದೆ ಎಂದು ತಿಳಿಸಿದರು.