ಬೆಳ್ತಂಗಡಿ,ಮೇ. 21 (DaijiworldNews/TA): ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ಸಂದ ಸಂದರ್ಭದಲ್ಲಿ, ಯಶಸ್ವಿ ಶಕ್ತಿ ಯೋಜನೆ ಸಂತಸದಲ್ಲಿ ಇಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಸಂಭ್ರಮಾಚರಣೆ ನಗರದ ಬಸ್ ನಿಲ್ದಾಣದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ನುಡಿದಂತೆ ನಡೆದು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ತಾಲ್ಲೂಕಿನಲ್ಲಿ 1.25 ಕೋಟಿ ಮಹಿಳೆಯರು ಶಕ್ತಿ ಯೋಜನೆಯನ್ನು ಉಪಯೋಗಿಸಿದ್ದು , ರಾಜ್ಯ ಸರ್ಕಾರ 65 ಕೋಟಿ ರೂಪಾಯಿಗಳನ್ನು ನಮ್ಮ ತಾಲೂಕಿಗೆ ನೀಡಿದೆ. ಯಾವುದೇ ಕಾರಣಕ್ಕೂ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಬದಲಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುತ್ತೇವೆ. ರಾಜ್ಯ ಸರ್ಕಾರ ಹೊಸ ಎಲೆಕ್ಟ್ರಾನಿಕ್ ಬಸ್ ಗಳನ್ನು ಖರೀದಿ ಮಾಡಲು ನಿರ್ಧರಿಸಿದ್ದು , ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 400 ಬಸ್ ಗಳನ್ನು ನೀಡಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧಿಕ್ಷಕ ಪ್ರಶಾಂತ್ ಬಳೆಂಜ , ಕೆಎಸ್ಆರ್ಟಿಸಿ ಧರ್ಮಸ್ಥಳ ಡಿಪೋದ ಪಾರುಪತ್ಯಗಾರ ಅತಾವುಲ್ಲಾ , ಮೇಲ್ವಿಚಾರಕ (ಸಿಬ್ಬಂದಿ) ರೋಶನ್ , ಡಿಟಿಐ ರಮೇಶ್ , ಬೆಳ್ತಂಗಡಿ ಬಸ್ ನಿಲ್ದಾಣ ಸಂಚಾರ ನಿಯಂತ್ರಕ ಆರ್ ವಸಂತ್ , ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸೌಮ್ಯ ಲಾಯಿಲ , ವಂದನಾ ಭಂಡಾರಿ , ಕೇಶವ ನಾಯ್ಕ್ , ಮೆರಿಟಾ ಪಿಂಟೊ , ವಿಜಯ ಗೌಡ , ನೇಮಿರಾಜ್ ಕಿಲ್ಲೂರು , ಶರೀಫ್ ಸಬರಬೈಲು , ವೀರಪ್ಪ ಮೊಯ್ಲಿ ಹಾಗೂ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಾಜರಿದ್ದ ಕೆಎಸ್ಆರ್ಟಿಸಿ ಅಧಿಕಾರಿಗಳು , ಚಾಲಕ , ನಿರ್ವಾಹಕರನ್ನು ಶಾಲು ಹೊದಿಸಿ , ಗುಲಾಬಿ ಹೂವು ನೀಡಿ ಗೌರವಿಸಲಾಯಿತು. ಪ್ರಯಾಣಿಕರಿಗೆ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.