ಮಂಗಳೂರು, ಮೇ. 21 (DaijiworldNews/TA): ಎರಡು ದಿನಗಳಿಂದ ಸುರಿದ ಮಳೆಯಿಂದ ಮಂಗಳೂರು ಹೊರವಲಯದ ಅಡ್ಡೂರು ಗ್ರಾಮದ ನೂಯಿ ನಿವಾಸಿಗಳು ಹೈರಾಣಾಗಿ ಹೋಗಿದ್ದಾರೆ. ಈ ಭಾಗದಲ್ಲಿ ರಾಷ್ಟೀಯ ಹೆದ್ದಾರಿ 169 ಬಿಕರ್ಣಕಟ್ಟೆ ಸಾಣೂರು ಚತುಷ್ಪಥ ಕಾಮಗಾರಿ ನಡೆಯುತ್ತಿದ್ದ ಭಾಗದಲ್ಲಿ ಅವೈಜ್ಙಾನಿಕವಾಗಿ ಹೆದ್ದಾರಿ ಕಾಮಗಾರಿ ಮಾಡಿದೆ. ಇಲ್ಲಿ ಸರಿಸುಮಾರು ಹತ್ತು ಅಡಿ ಎತ್ತರದ ವರೆಗೆ ಮಣ್ಣು ತುಂಬಿ ತಡೆಗೋಡೆ ಇಲ್ಲದೆ ನೂತನ ರಸ್ತೆ ನಿರ್ಮಾಣ ಮಾಡಿದ್ದು, ಇತ್ತೀಚಿಗೆ ಸುರಿದ ಮಳೆಗೆ ರಸ್ತೆಗೆ ಹಾಕಲಾದ ಮಣ್ಣು ನೀರು ಸಮೇತ ಹರಿದು ಸ್ಥಳೀಯ ನಿವಾಸಿಗಳ ಮನೆ ಕೃಷಿ ತೋಟಗಳಿಗೆ ನುಗ್ಗಿದೆ. ಇದರಿಂದ ಸ್ಥಳೀಯರು ಮನೆಯಿಂದ ಹೊರ ಬರದ ಪರಿಸ್ಥಿತಿ ಎದುರಾಗಿದೆ.















ಇನ್ನು ಈ ಭಾಗದಲ್ಲಿ ಸಣ್ಣಪುಟ್ಟ ಗುಡ್ಡದ ಬಳಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆಯೇ ಹೊರತು ಜನರಿಗೆ ಬೇಕಾಗುವ ಕಡೆ ಯಾವುದೇ ತಡೆಗೋಡೆ ನಿರ್ಮಾಣ ಮಾಡಿಲ್ಲ. ಮಾತ್ರವಲ್ಲದೆ ರಸ್ತೆಗೆ ಹತ್ತು ಅಡಿ ಎತ್ತರದಲ್ಲಿ ಮಣ್ಣು ತುಂಬಿದ್ದು ಸ್ಥಳೀಯ ಒಂದು ಗ್ರಾಮಕ್ಕೆ ಸಂಪರ್ಕವೇ ಇಲ್ಲದಂತಾಗಿದ್ದು ಜನರು ಮುಖ್ಯರಸ್ತೆಗೆ ಬರಲು ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಾಣ ಆಗುತ್ತೆ ಎಂದು ಈ ಹಿಂದೆ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಈ ವರೆಗೆ ಏನು ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು. ಈ ಭಾಗದಲ್ಲಿ ಗುಡ್ಡವನ್ನು ಅಗೆದು ಹೆದ್ದಾರಿ ಕಾಮಗಾರಿ ಮಾಡಲಾಗಿದ್ದು ಸ್ಥಳೀಯ ಮನೆಗಳ ಆವರಣ ಗೋಡೆ ಕುಸಿಯುವ ಭೀತಿಯಲ್ಲಿದೆ. ಮಾತ್ತವಲ್ಲದೆ ಸಮರ್ಪಕ ಯೋಜನೆ ಇಲ್ಲದ ಹೆದ್ದಾರಿ ಕಾಮಗಾರಿಯಿಂದ ಗ್ರಾಮದ ಜನ ಸಂಕಷ್ಟ ಪಡುವಂತಾಗಿದೆ.