ಉಡುಪಿ, ಮೇ. 22 (DaijiworldNews/AA): ಮಣಿಪಾಲದ ಸಿಂಡಿಕೇಟ್ ವೃತ್ತದಿಂದ ಲಕ್ಷ್ಮೀಂದ್ರ ನಗರದ ಕಡೆಗೆ ಸಾಗುವ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಸುರಿದ ಭಾರೀ ಮಳೆಯಿಂದಾಗಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಚರಂಡಿ ಸಮಸ್ಯೆಗಳು ಹೀಗೆಯೇ ಮುಂದುವರಿದರೆ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ.














ಲಕ್ಷ್ಮೀಂದ್ರ ನಗರದ ಕಡೆಗೆ ಹರಿಯುವ ನೀರನ್ನು ಹರಿಸಲು ಸಿಂಡಿಕೇಟ್ ವೃತ್ತದ ಬಳಿ ತಕ್ಷಣವೇ ಮಳೆನೀರು ಚರಂಡಿಯ ಅಗತ್ಯವಿದೆ. ಇದರ ಜೊತೆಗೆ, ಮಣ್ಣು ಮತ್ತು ಕಲ್ಲುಗಳು ಕೊಚ್ಚಿ ಹೋಗಿರುವ ಪ್ರದೇಶಗಳಲ್ಲಿ ತಕ್ಷಣ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು.
ಸಿಂಡಿಕೇಟ್ ವೃತ್ತದ ಬಳಿ ಸಂಗ್ರಹವಾದ ಮಳೆನೀರಿಗೆ ಕುಂಡೇಲು ಕಾಡಿನ ಕಡೆಗೆ ಹರಿಯಲು ಸರಿಯಾದ ಮಾರ್ಗವಿರದೆ ನೀರು ನೇರವಾಗಿ ರಸ್ತೆಗೆ ಹರಿದಿತ್ತು. ಈ ವೇಳೆ ಅದು ರಸ್ತೆಯ ಪಕ್ಕದಲ್ಲಿದ್ದ ಸುಮಾರು 50 ಮೀಟರ್ ವ್ಯಾಪ್ತಿಯ ಕಲ್ಲುಗಳನ್ನು ಮತ್ತು ದೊಡ್ಡ ದೊಡ್ಡ ಕಲ್ಲುಗಳನ್ನು ಕೊಚ್ಚಿಕೊಂಡು ಬಂದಿತು. ಇದು ಹೆದ್ದಾರಿಯಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಿತ್ತು. ಪ್ರವಾಹದೋಪಾದಿಯ ನೀರು 200 ಮೀಟರ್ಗಿಂತಲೂ ಹೆಚ್ಚು ದೂರಕ್ಕೆ ಮಣ್ಣು ಮತ್ತು ಕಸವನ್ನು ಹೊತ್ತು ತಂದು, ಹತ್ತಿರದ ಅಂಗಡಿಗಳು ಮತ್ತು ಮನೆಗಳಿಗೆ ಹಾನಿಯನ್ನುಂಟು ಮಾಡಿದ್ದಲ್ಲದೆ, ಲಕ್ಷ್ಮೀಂದ್ರ ನಗರದಲ್ಲೂ ಸಮಸ್ಯೆಗಳನ್ನು ಸೃಷ್ಟಿಸಿತ್ತು. ಈ ಸಮಸ್ಯೆಗಳಿಗೆ ಮುಖ್ಯ ಕಾರಣ ರಸ್ತೆಯ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು.
ಮಣಿಪಾಲ ಭಾಗದಿಂದ ಹರಿದು ಬರುವ ಮಳೆನೀರು ಸಾಮಾನ್ಯವಾಗಿ ಅಪಾರ್ಟ್ಮೆಂಟ್ವೊಂದರ ಮುಂಭಾಗದ ಚರಂಡಿಯ ಮೂಲಕ ಪಕ್ಕದ ಕುಂಡೇಲು ಕಾಡಿಗೆ ಹರಿಯುತ್ತದೆ. ಆದರೆ, ಇಲ್ಲಿ ಯಾವುದೇ ಒಳಚರಂಡಿ ಸೌಲಭ್ಯವಿಲ್ಲ. ಈ ನೀರನ್ನು ತಡೆದ ಪರಿಣಾಮ ಮಂಗಳವಾರ ಈ ಸಮಸ್ಯೆ ಸೃಷ್ಟಿಯಾಗಿತ್ತು.
ಮಳೆನೀರು ಹರಿದು ಹೋಗಲು ಹೆದ್ದಾರಿಯ ಉದ್ದಕ್ಕೂ ಯಾವುದೇ ಒಳಚರಂಡಿ ವ್ಯವಸ್ಥೆ ಇಲ್ಲ. ಚರಂಡಿಯನ್ನು ನಿರ್ಮಿಸಬಹುದಾದ ಸ್ಥಳಗಳಲ್ಲಿ, ಮಣ್ಣು ಮತ್ತು ಕಲ್ಲುಗಳನ್ನು ಹಾಕಲಾಗಿತ್ತು. ಇದರಿಂದಾಗಿ ಮಣ್ಣು ಮತ್ತು ಕಲ್ಲುಗಳು ಒಂದೇ ಮಳೆಗೆ ಕೊಚ್ಚಿ ಹೋಗಿದೆ. ಪ್ರಸ್ತುತ ಮಳೆ ನೀರು ರಸ್ತೆಯಲ್ಲಿಯೇ ಹರಿದುಹೋಗುವ ಸ್ಥಿತಿಯಿದೆ. ಬುಧವಾರದ ಮಳೆಗೂ ನೀರು ನೇರವಾಗಿ ರಸ್ತೆಯಲ್ಲಿಯೇ ಹರಿದಿದೆ.
ಪ್ರಸ್ತುತ ಒಳಚರಂಡಿ ವ್ಯವಸ್ಥೆಯು ಮಣಿಪಾಲ ವೃತ್ತದ ಬಳಿ ಪ್ರಾರಂಭವಾಗುತ್ತದೆ. ಆದರೆ ಅದು ಕೂಡ ಕಿರಿದಾಗಿದ್ದು, ಭಾರೀ ಮಳೆ ಬಂದರೆ ನೀರು ರಸ್ತೆಯ ಮೇಲೆಯೇ ಹರಿದುಹೋಗಬೇಕು. ಎತ್ತರದ ಪ್ರದೇಶದಿಂದ ಕೆಳಗಿನವೆರೆಗೆ ಚರಂಡಿಯನ್ನು ನಿರ್ಮಿಸಿ, ಅಸ್ತಿತ್ವದಲ್ಲಿರುವ ಚರಂಡಿಯನ್ನು ಅಗಲಗೊಳಿಸಿದರೆ ಈ ಸಮಸ್ಯೆಗೆ ಭಾಗಶಃ ಪರಿಹಾರ ಸಿಗಬಹುದು.
ಹೆದ್ದಾರಿಗೆ ಕೊಚ್ಚಿ ಬಂದಿದ್ದ ಸಣ್ಣ ಸಣ್ಣ ಕಲ್ಲುಗಳು ಮತ್ತು ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿಲ್ಲ. ದೊಡ್ಡ ಗಾತ್ರದ ಕಲ್ಲುಗಳನ್ನು ಡಿವೈಡರ್ ಮೇಲೆ ಇರಿಸಲಾಗಿದ್ದರೂ, ಸಣ್ಣಪುಟ್ಟ ಕಲ್ಲುಗಳು ಇನ್ನೂ ರಸ್ತೆಯಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರಿಂದಾಗಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಅಪಘಾತಗಳು ಸಂಭವಿಸುತ್ತಿವೆ ಎನ್ನಲಾಗಿದೆ. ಮಳೆನೀರು ರಸ್ತೆಯ ಬದಿಯಲ್ಲಿ ಹರಿದುಹೋಗಿ ದೊಡ್ಡ ಹೊಂಡಗಳನ್ನು ಸೃಷ್ಟಿಸಿದೆ. ಇದರ ನಡುವೆಯೇ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಬರುವುದರಿಂದ ಅಪಘಾತವಾಗುವ ಸಾಧ್ಯತೆ ಹೆಚ್ಚಾಗಿದೆ.