ಸುಳ್ಯ, ಮೇ. 22 (DaijiworldNews/TA): ನಗರದಲ್ಲಿ ಅಗ್ನಿಶಾಮಕ ವಾಹನದ ಜೊತೆಗೆ ಮೊಳಗಿದ ಆಂಬ್ಯುಲೆನ್ಸ್ ಗಳ ಸೈರನ್ ಗಳು. ಏನಿದು? ಎಲ್ಲಿ ಅವಘಡ ಸಂಭವಿಸಿತು ಎಂದು ಜನಸಾಮಾನ್ಯರಲ್ಲಿ ಮೂಡಿದ ಪ್ರಶ್ನೆ. ಆದರೆ ಇದು ವಿಪತ್ತು ಬಂದ ಸಂದರ್ಭದಲ್ಲಿ ಅಗ್ನಿಶಾಮಕ ದಳದವರು ಯಾವ ರೀತಿ ಸ್ಪಂದಿಸುತ್ತಾರೆಂದು ಸಾರ್ವಜನಿಕರಿಗೆ ತಿಳಿಸಲು ಮಾಡಿದ ಅಣಕು ಕಾರ್ಯಾಚರಣೆ ಎಂಬುದು ಬಳಿಕ ತಿಳಿದು ಬಂದಾಗ ಜನತೆ ನಿಟ್ಟುಸಿರು ಬಿಟ್ಟರು.

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಸುಳ್ಯ ಅಗ್ನಿಶಾಮಕ ಠಾಣೆ ವತಿಯಿಂದ ವಿವಿಧ ಇಲಾಖೆಯ ಸಹಯೋಗದೊಂದಿಗೆ ಅಗ್ನಿಸುರಕ್ಷತೆ ಮತ್ತು ತುರ್ತು ಸಂದರ್ಭಗಳಲ್ಲಿ ಅವಘಡ ಉಂಟಾದಲ್ಲಿ ತಕ್ಷಣ ಕ್ರಮ ಕೈಗೊಳ್ಳುವ ಕುರಿತು ಅರಿವು ಮೂಡಿಸುವ ಸಲುವಾಗಿ ಮೇ 21ರಂದು ಕೆವಿಜಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಅಣಕು ಕಾರ್ಯಾಚರಣೆ ನಡೆಯಿತು. ಸುಳ್ಯದ ಜ್ಯೋತಿ ಸರ್ಕಲ್ ನಿಂದ ಝೀರೋ ಟ್ರಾಫಿಕ್ ನಲ್ಲಿ ಅಗ್ನಿಶಾಮಕ ವಾಹನ ಮತ್ತು ಆಂಬ್ಯುಲೆನ್ ಗಳು ಸುಳ್ಯ ಪೇಟೆಯಲ್ಲಿ ರಥಬೀದಿ ಮೂಲಕ ಕೆವಿಜಿ ಕ್ಯಾಂಪಸ್ ಕಡೆಗೆ ಹೋದವು.