ಮಂಗಳೂರು, ಮೇ. 22 (DaijiworldNews/AK):ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ಭೀಕರ ವಿಮಾನ ಅಪಘಾತಕ್ಕೆ 15 ನೇ ವರ್ಷ ತುಂಬಿದೆ. ಇದರ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗುರುವಾರ ಮೇ( ೨೨) ಇಂದು ಮಡಿದವರಿಗೆ ಗೌರವ ಸಲ್ಲಿಸಲಾಯಿತು.




ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಸ್ಮರಣಾರ್ಥ ತಣ್ಣೀರುಬಾವಿ ಬಳಿ ನಿರ್ಮಿಸಲಾದ ಸ್ಮಾರಕದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದಕ್ಷಿಣ ಕನ್ನಡ ಉಸ್ತುವಾರಿ ಜಿಲ್ಲಾಧಿಕಾರಿ ಡಾ. ಆನಂದ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಪಣಂಬೂರು ಎಸಿಪಿ ಕೆ. ಶ್ರೀಕಾಂತ್ ಮತ್ತು ತಹಶೀಲ್ದಾರ್ ನವೀನ್ ಕುಮಾರ್ ಸ್ಥಳದಲ್ಲಿ ಉಪಸ್ಥಿತರಿದ್ದು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
2010 ರ ಮೇ 22 ರಂದು ಬೆಳಿಗ್ಗೆ 6:20 ಕ್ಕೆ ದುಬೈನಿಂದ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಕೆಂಜಾರ್ನ ಬಜ್ಪೆಯಲ್ಲಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ 166 ಜನರಲ್ಲಿ 158 ಜನರು ಪ್ರಾಣ ಕಳೆದುಕೊಂಡರು, ಆದರೆ 8 ಜನರು ಪವಾಡ ಸದೃಶವಾಗಿ ಬದುಕುಳಿದರು.
ಮೃತರಲ್ಲಿ, ಹಲವಾರು ಶವಗಳನ್ನು ಗುರುತಿಸಲಾಗಲಿಲ್ಲ ಮತ್ತು ಅವುಗಳನ್ನು ಕೂಳೂರಿನ ಫಲ್ಗುಣಿ ನದಿಯ ದಡದಲ್ಲಿ ಸಮಾಧಿ ಮಾಡಲಾಯಿತು. ಮಡಿದವರ ಸ್ಮರಣಾರ್ಥವಾಗಿ ಆ ಸ್ಥಳದಲ್ಲಿ ಸ್ಮಾರಕ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ.