ಮಂಗಳೂರು, ಮೇ. 23 (DaijiworldNews/AA): ವಿಧಾನ ಪರಿಷತ್ ವಿಪಕ್ಷ ನಾಯಕ, ಶೋಷಿತ ಸಮುದಾಯಗಳ ಪ್ರಬಲ ಧ್ವನಿಯಾಗಿರುವ ಛಲವಾದಿ ನಾರಾಯಣಸ್ವಾಮಿ ಮೇಲೆ ಕಾಂಗ್ರೆಸ್ನ ಗೂಂಡಾ ಬೆಂಬಲಿಗರು ಕಲಬುರಗಿಯ ಚಿತ್ತಾಪುರದಲ್ಲಿ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕುವ ಜತೆಗೆ ಅವರ ಕಾರಿಗೆ ಬಣ್ಣ ಹಾಕಿ ದಾಂಧಲೆ ನಡೆಸಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯದ ಪ್ರತಿಪಕ್ಷದ ನಾಯಕರ ಮೇಲಿನ ಕಾಂಗ್ರೆಸ್ ಕಾರ್ಯಕರ್ತರ ಈ ರೀತಿಯ ಗೂಂಡಾ ವರ್ತನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, "ಕಲಬುರಗಿಯಲ್ಲಿ ನಡೆದ ಈ ದುಂಡಾವರ್ತನೆಯ ಘಟನೆಯು ಡಾ. ಅಂಬೇಡ್ಕರ್ ಅವರ ಆಶಯದ ಸಂವಿಧಾನಕ್ಕೆ ಮಾಡಿದ ಅಪಚಾರ. ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ಪ್ರತಿಪಕ್ಷ ನಾಯಕರ ಕರ್ತವ್ಯ. ಅದನ್ನು ನಾರಾಯಣಸ್ವಾಮಿ ಸರಿಯಾಗಿಯೇ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಗೂಂಡಾಗಳು ಕಾರಿನ ಮೇಲೆ ಬಣ್ಣ ಎಸೆದು ನಾರಾಯಣಸ್ವಾಮಿಗೆ ಜೀವಬೆದರಿಕೆ ಹಾಕುತ್ತಿದ್ದರೆ, ಅತ್ತ ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತಿಸಿ ಸಾಂವಿಧಾನಿಕ ಹುದ್ದೆಯಲ್ಲಿರುವ ನಾಯಕರಿಗೆ ಸೂಕ್ತ ರಕ್ಷಣೆ ನೀಡಲು ವಿಫಲರಾಗಿರುವುದು ವಿಪರ್ಯಾಸ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ಛಲವಾದಿ ನಾರಾಯಣಸ್ವಾಮಿ ಅವರನ್ನು ಚಿತ್ತಾಪುರದ ಐಬಿಯಲ್ಲಿ ಸತತ ಮೂರು ಗಂಟೆಗೂ ಹೆಚ್ಚು ಕಾಲ ಕೂಡಿ ಹಾಕಿ ಬೇರೆ ಕಾರ್ಯಕ್ರಮದಲ್ಲಿಯೂ ಭಾಗವಹಿಸುವುದಕ್ಕೆ ಅವಕಾಶ ನೀಡದೆ ದಿಗ್ಭಂಧನ ಹಾಕಿದ್ದಾರೆ. ಈ ಘಟನೆಯ ಹಿಂದೆ ಪ್ರಿಯಾಂಕ್ ಖರ್ಗೆ ಕೈವಾಡವಿರುವುದು ಸ್ಪಷ್ಟ. ಈ ಹಿಂದೆ ಬಿಜೆಪಿ ನಾಯಕ ಸಿಟಿ ರವಿ ಅವರ ಮೇಲೂ ಇದೇ ರೀತಿ ಕಾಂಗ್ರೆಸ್ ಬೆಂಬಲಿತ ಗೂಂಡಾಗಳು ದಾಳಿಗೆ ಯತ್ನಿಸಿದ್ದರು. ಆದರೆ, ಕಾಂಗ್ರೆಸ್ನವರು ಇಂಥಹ ಗೂಂಡಾಗಿರಿ ವರ್ತನೆ ಮೂಲಕ ಬಿಜೆಪಿ ನಾಯಕರ ಹೋರಾಟದ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಿದರೆ ಅದಕ್ಕೆ ನಮ್ಮ ಪಕ್ಷ ಎಂದಿಗೂ ಬಗ್ಗುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.
"ನಮ್ಮ ದೇಶದ ಪ್ರಧಾನಿಮಂತ್ರಿ ಮೋದಿಯವರನ್ನು ಕಾಂಗ್ರೆಸ್ಸಿನ ಅನೇಕ ನಾಯಕರು ಅನೇಕ ಬಾರಿ ನಿಂದಿಸಿ ಮಾತನಾಡಿದ್ದು ಇದೆ. ಹಾಗೆಂದ ಮಾತ್ರಕ್ಕೆ ನಾವು ದ್ವೇಷ ಸಾಧನೆ ಮಾಡಲಾದೀತೆ? ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಟೀಕೆಗಳು ಸಹಜ. ಅದನ್ನು ಆರೋಗ್ಯಕರವಾಗಿ ಸ್ವೀಕರಿಸುವ ಮನಸ್ಸು ಇರಬೇಕು. ಅದುಬಿಟ್ಟು, ಕಾಂಗ್ರೆಸ್ ಸರ್ಕಾರದ ಸಚಿವರು ಗೂಂಡಾಗಳನ್ನು ಬಳಸಿ ಬಿಜೆಪಿ ನಾಯಕರನ್ನು ಬೆದರಿಸಲು ಪ್ರಯತ್ನಿಸಿರುವುದು ಹೇಡಿತನ ಹಾಗೂ ಅಧಿಕಾರದ ಮದ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ತತ್ವಗಳಿಗೆ ಬದ್ಧರಾಗಿದ್ದರೆ ಛಲವಾದಿ ನಾರಾಯಣಸ್ವಾಮಿ ಅವರಿಗೆ ಕೂಡಲೇ ಸೂಕ್ತ ಭದ್ರತೆ ನೀಡಿ, ಈ ಕೃತ್ಯದ ಹಿಂದಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸುವುದು ಕೈಗೊಳ್ಳಬೇಕೆಂದು" ಎಂದು ಒತ್ತಾಯಿಸಿದ್ದಾರೆ.