ಕಾಸರಗೋಡು, ಮೇ. 23 (DaijiworldNews/AA): ಚಲಿಸುತ್ತಿದ್ದ ಕಾರು ಅಗ್ನಿ ಗಾಹುತಿಯಾದ ಘಟನೆ ಶುಕ್ರವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯ ಚೆರ್ಕಳ ಸಮೀಪದ ಬೇವಿಂಜೆ ಎಂಬಲ್ಲಿ ನಡೆದಿದೆ.



ಕಾರಲ್ಲಿದ್ದ ಐವರ ಕುಟುಂಬ ಅಪಾಯದಿಂದ ಪಾರಾಗಿದ್ದಾರೆ. ಮುಂಬೈಯಿಂದ ಕಣ್ಣೂರಿನ ಕಣ್ಣಾಪುರಕ್ಕೆ ತೆರಳುತ್ತಿದ್ದ ಕಾರು ಬೇವಿಂಜೆಗೆ ತಲುಪಿದಾಗ ಬೋನೆಟ್ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಎಲ್ಲರೂ ಹೊರಬಂದರು. ಕೆಲವೇ ಕ್ಷಣದಲ್ಲಿ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಕಾರಿನೊಳಗಿದ್ದ ಹಣ, ಮೊಬೈಲ್, ಕ್ಯಾಮರಾ ಮೊದಲಾದವು ಹೊತ್ತಿ ಉರಿದಿವೆ. ನಗದು ಅಲ್ಲದೆ ನಾಲ್ಕು ಪವನ್ ಚಿನ್ನಾಭರಣ, ಎರಡು ಮೊಬೈಲ್ ಫೋನ್, ಕ್ಯಾಮರಾ ಮೊದಲಾದವು ಕಾರಿನಲ್ಲಿತ್ತು ಎನ್ನಲಾಗಿದೆ.
ಮುಂಬೈನಲ್ಲಿರುವ ಇಕ್ಬಾಲ್ ಅಹ್ಮದ್ ಎಂಬವರು ಪತ್ನಿ, ಮಕ್ಕಳ ಸಹಿತ ಕಣ್ಣಾಪುರದಲ್ಲಿರುವ ಪತ್ನಿಯ ಸಹೋದರನ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಒಂದೂವರೆ ತಿಂಗಳ ಹಿಂದೆಯಷ್ಟೆ ಸಿ.ಎನ್.ಜಿ ಕಾರು ಖರೀದಿಸಿದ್ದರು ಎನ್ನಲಾಗಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.