ಬೆಳ್ತಂಗಡಿ, ಮೇ. 24 (DaijiworldNews/AA): ರಿಕ್ಷಾ ಮತ್ತು ಪಿಕಪ್ ಢಿಕ್ಕಿಯಾದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ- ಕಲ್ಮಂಜ-ಧರ್ಮಸ್ಥಳ ರಸ್ತೆಯ ಮುಂಡಾಜೆಯ ಕೆದಿಹಿತ್ತು ಎಂಬಲ್ಲಿರುವ ಕಿರು ಸೇತುವೆ ಬಳಿ ಗುರುವಾರ ಸಂಜೆ ನಡೆದಿದೆ.

ರಿಕ್ಷಾ ಚಾಲಕ ಮುಂಡಾಜೆ ಗ್ರಾಮದ ಮೂಲಾರು ನಿವಾಸಿ ಕುಶಾಲಪ್ಪ ದೇವಾಂಗ (42) ಅವರ ಕಾಲಿಗೆ ಗಂಭೀರ ಗಾಯವಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ನಲ್ಲಿದ್ದ ಕೊಕ್ಕಡದ ಡೀಕಯ್ಯ (43) ಎಂಬವರ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಇಲ್ಲಿನ ಕೆಲವು ಕಿರು ಸೇತುವೆಗಳು ಸಂಪೂರ್ಣ ಶಿಥಿಲವಾಸ್ಥೆ ತಲುಪಿದ್ದು ಯಾವುದೇ ಕ್ಷಣದಲ್ಲಿ ಉರುಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.