ಸುಳ್ಯ, ಮೇ. 25 (DaijiworldNews/TA): ನಗರದ ಅಲ್ಲಲ್ಲಿ ರಸ್ತೆಯಲ್ಲಿರುವ ಗುಂಡಿಗಳು ಯಮಸ್ವರೂಪಿಯಾಗಿ ಕಾಡುತ್ತಲೇ ಇವೆ, ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚುತ್ತಿವೆ. ಇದನ್ನು ಕಾಲಕಾಲಕ್ಕೆ ಮುಚ್ಚಿ, ದುರಸ್ತಿ ಮಾಡಿ ಪಾದಚಾರಿಗಳನ್ನು, ದ್ವಿಚಕ್ರ ವಾಹನ ಸವಾರರನ್ನು ಕಾಪಾಡಬೇಕಾದ ಅಧಿಕಾರಿಗಳು ತಮಗೆ ಏನೂ ತಿಳಿದಿಲ್ಲವೋ ಏನೋ ಎನ್ನುವಂತೆ ದಿವ್ಯಮೌನದಿಂದಿದ್ದಾರೆ.

ಸರಿಪಡಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಜನಪ್ರತಿನಿಧಿಗಳು ಜನರನ್ನೇ ಜವಾಬ್ದಾರರನ್ನಾಗಿ ಮಾಡಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಮೃತ್ ಯೋಜನೆಯ ಪೈಪ್ ಅಳವಡಿಕೆಗೆ ಕಾಂಕ್ರೀಟ್ ರಸ್ತೆಗಳನ್ನೇ ಅಗೆದು ತೆಗೆಯಲಾಗಿದ್ದರೆ, ಅದನ್ನು ಮುಚ್ಚಬೇಕಾದರೆ ಹೋರಾಟವನ್ನೇ ಮಾಡಬೇಕಾದ ಪರಿಸ್ಥಿತಿ.
ಪೈಪು ಹಾಕುವ ಕಾಮಗಾರಿ ಮುಗಿಯಿತೆನ್ನುವಾಗ ಟೆಲಿಫೋನ್ ಕೇಬಲ್ ನವರು ಅಗೆಯುತ್ತಾರೆ. ಪೈಪ್ ಹಾಕುವವರು ಬಿ ಎಸ್ ಎನ್ ಎಲ್ ನವರೊಂದಿಗೆ ಸಮಾಲೋಚಿಸದೆಯೇ ಅಗೆಯುವುದರಿಂದ ನೆಲದಡಿ ಅಳವಡಿಸಲಾದ ಫೋನ್ ಕೇಬಲ್ ಗಳು ತುಂಡಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಕಳೆದ ವಾರ ಸುಳ್ಯ ನಗರದಲ್ಲಿ ಈ ರೀತಿ ಮಾಡಿದ ಕಾರಣ ತಾಲೂಕು ಕಚೇರಿಯಲ್ಲಿ ಆಗಬೇಕಾದ ಆನ್ಲೈನ್ ಕೆಲಸಗಳು ಪೆಂಡಿಂಗ್ ಆಗಬೇಕಾಯಿತು ಎನ್ನಲಾಗಿದೆ.