ಬಂಟ್ವಾಳ, ಮೇ. 25(DaijiworldNews/TA): ಕಳೆದ ವಾರಗಳಿಂದ ನಿರಂತರವಾಗಿ ಸುರಿಯುವ ವಾಯುಭಾರ ಕುಸಿತದ ಭೀಕರ ಮಳೆಗೆ ತಾಲೂಕಿನ ಅಲ್ಲಲ್ಲಿ ಹಾನಿಯಾಗಿದ್ದು ಮನೆಯೊಂದಕ್ಕೆ ನೀರು ನುಗ್ಗಿದ ಘಟನೆ ನಡೆದಿದೆ.




ಸಜೀಪ ಮುನ್ನೂರು ಗ್ರಾಮದ ಮುಬಾರಕ್ ಎಂಬವರ ಮನೆಯೊಳಗೆ ನೀರು ನುಗ್ಗಿದ್ದು,ಸದ್ಯ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಮಳೆಗಾಲ ಆರಂಭವಾಗುವ ಮುನ್ನ ಸ್ಥಳೀಯ ಆಡಳಿತ ಮಳೆ ನೀರು ಸರಾಗವಾಗಿ ಹರಿದುಹೋಗಲು ಸರಿಯಾದ ವ್ಯವಸ್ಥೆ ಮಾಡದೆ ಚರಂಡಿ ಇಲ್ಲದ ಕಾರಣ ಚರಂಡಿಯ ನೀರು ಮನೆಯೊಳಗೆ ನುಗ್ಗಿದೆ ಎಂದು ಆಪಾದಿಸಲಾಗಿದೆ.
ನೆಟ್ಲಮುನ್ನೂರು ಗ್ರಾಮದ ಪರ್ಲೊಟ್ಟು ಬಳಿ ಮರ ಬಿದ್ದು ಜನರ ಓಡಾಟದ ಅಗತ್ಯವಾದ ಕಾಲುಸಂಕ ಮುರಿದುಬಿದ್ದಿದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಉಕ್ಕುಡ ದರ್ಬೆ ಯಲ್ಲಿ ಶಿಥಿಲಗೊಂಡ ಛಾವಣಿಗೆ ಟಾರ್ಪಲ್ ಅಳವಡಿಸಲು ಕ್ರಮವಹಿಸಲಾಗಿದೆ. ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ಅಬುಬಕ್ಕರ್ ಮನೆಯ ಗೋಡೆ ಹಾಗೂ ಹಂಚಿಗೆ ಹಾನಿಯಾಗಿದೆ.
ಬಡಗಬೆಳ್ಳೂರು ಗ್ರಾಮದ ಮಮತಾ ಎಂಬವರ ಮನೆಯ ಬದಿ ತಡೆಗೋಡೆ ಬಿದ್ದು ಮನೆಗೆ ಹಾನಿ ಆಗಿದೆ. ಬಿ ಮೂಡ ಗ್ರಾಮದ ಗೂಡಿನ ಬಳಿ ಎಂಬಲ್ಲಿಯ G.M ಅಬ್ದುಲ್ ಲತೀಫ್ ಎಂಬವರ ತಡೆಗೋಡೆ ಬಿದ್ದಿದ್ದು ಮನೆಗೆ ಯಾವುದೇ ಹಾನಿಯಾಗಿಲ್ಲ. ಹಾನಿಯಾದ ಪ್ರದೇಶಗಳಿಗೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿದ್ದಾರೆ.