ಕಡಬ, ಮೇ. 27 (DaijiworldNews/AA): ಬೃಹತ್ ಗಾತ್ರದ ಮಾವಿನ ಮರವೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಮಾರುತಿ-800 ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣ ಜಖಂಗೊಂಡ ಘಟನೆ ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ರಾಮಕುಂಜ ಗ್ರಾಮದ ಆತೂರಿನಲ್ಲಿ ಸೋಮವಾರ ಸಂಜೆ ನಡೆದಿದೆ.

ಸ್ಥಳೀಯರಾದ ಅಬ್ದುಲ್ ಸಲೀಂ ಎಂಬುವವರು ತನ್ನ ಕಾರನ್ನು ರಸ್ತೆ ಬದಿ ನಿಲ್ಲಿಸಿ ಅಂಗಡಿಗೆ ತೆರಳಿದ್ದರು. ಅವರ ಸ್ನೇಹಿತರಾದ ಅಬ್ದುಲ್ ರಹಿಮಾನ್, ರಮ್ಲಾನ್ ಹಾಗೂ ಅಬ್ಬಾಸ್ ಕಾರಿನಲ್ಲೇ ಕುಳಿತಿದ್ದರು. ಅಷ್ಟರಲ್ಲಿ ರಸ್ತೆ ಬದಿಯ ಬೃಹತ್ ಮಾವಿನ ಮರ ವಾಲುತ್ತಿರುವುದನ್ನು ಗಮನಿಸಿ ಕಾರಿನಿಂದ ಇಳಿದು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾವಿನ ಮರ ಬುಡ ಸಮೇತ ರಸ್ತೆಗೆ ಬಿದ್ದಿದ್ದು, ಕೆಲ ಸಮಯ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಸ್ಥಳೀಯರು ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತುಂಡರಿಸಿ ತೆರವುಗೊಳಿಸಿದರು. ಬಳಿಕ ಕಾರಿನ ಮೇಲೆ ಬಿದ್ದಿದ್ದ ಮರವನ್ನು ಜೆಸಿಬಿ ಯಂತ್ರದ ಮೂಲಕ ತೆಗೆಯಲಾಯಿತು. ಇನ್ನು ವಿದ್ಯುತ್ ಲೈನ್ಗೆ ಕೂಡ ಹಾನಿಯುಂಟಾಗಿದೆ ಎಂದು ತಿಳಿದುಬಂದಿದೆ.
ಇನ್ನೊಂದು ಘಟನೆಯಲ್ಲಿ, ಹೆದ್ದಾರಿಯಲ್ಲಿ ಆಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿಯೂ ರಸ್ತೆಗೆ ಮರವೊಂದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಜೊತೆಗೆ ರಾಮಕುಂಜ ಗ್ರಾಮದ ಕುಂಡಾಜೆಯಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಮಾಲೇಶ್ವರ-ಪೊರಂತು ಸಂಪರ್ಕ ರಸ್ತೆಯ ಪಕ್ಕದಲ್ಲಿ ಮಣ್ಣು ಕುಸಿದು ರಸ್ತೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.