ಕಾರ್ಕಳ, ಮೇ. 28 (DaijiworldNews/AA): 1999 ಮೇ 19 ರಂದು ಖಾಸಗಿ ಮಾಲಕರ ಪ್ರಾಯೋಜಕತ್ವದಲ್ಲಿ ಆರಂಭಿಸಲಾದ ವಿಸ್ತೃತ ಬಸ್ ನಿಲ್ದಾಣವು ಪ್ರಸ್ತುತ ಕಾಲಘಟ್ಟದಲ್ಲಿ ಹಲವು ಸಮಸ್ಯೆಗಳ ತಾಣವಾಗಿ ಮಾರ್ಪಟ್ಟಿದೆ.




ಬಂಡೀಮಠ ಬಸ್ ನಿಲ್ದಾಣ ಅಧಿಕೃತವಾಗಿದ್ದರೂ, ನಗರದ ಹೃದಯಭಾಗದಲ್ಲಿ ಬಸ್ ನಿಲ್ದಾಣ ಉಳಿಸಲೇ ಬೇಕೆಂಬ ಛಲದೊಂದಿಗೆ ಉದ್ಯಮಿಗಳು ತಮ್ಮ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಅದರ ಎದುರುಗಡೆಯ ಖಾಲಿ ಜಾಗವನ್ನು ವಿಸ್ತೃತ ಬಸ್ ನಿಲ್ದಾಣಕ್ಕಾಗಿ ಕಾರ್ಕಳ ಪುರಸಭೆಗೆ ಹಸ್ತಾಂತರಿಸಿದ್ದರು. ವಿಸ್ತೃತ ಬಸ್ನಿಲ್ದಾಣ ವಿಸ್ತಾರ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಅಂಚೆ ಇಲಾಖೆಗೆ ಒಳಪಟ್ಟ ಜಾಗದಲ್ಲಿ ವಿಸ್ತೃತ ಬಸ್ ನಿಲ್ದಾಣ ವಿಸ್ತರಿಸಲಾಗಿತ್ತು.
ಸೋರುತ್ತಿರುವುದು ಬಸ್ ನಿಲ್ದಾಣ!
26 ವರ್ಷ ಕಳೆಯುತ್ತಾ ಬಂದಿರುವ ವಿಸ್ತೃತ ಬಸ್ ನಿಲ್ದಾಣದ ಪ್ರಗತಿಗೆ ಕಾರ್ಕಳ ಪುರಸಭೆ ಮುಂದಾಗುತ್ತಿಲ್ಲ. ಬಂಡೀಮಠ ಬಸ್ ನಿಲ್ದಾಣ-ವಿಸ್ತೃತ ಬಸ್ ನಿಲ್ದಾಣ ಕುರಿತು ನ್ಯಾಯಾಲಯದಲ್ಲಿ ವಿವಾದ ಇರುವುದು ಇದಕ್ಕೆ ಕಾರಣವೆನ್ನಬಹುದು. ವಿಸ್ತೃತ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ವ್ಯವಸ್ಥೆ ಇದೆಯಾದರೂ, ಮೇಲ್ಚಾವಣಿ ಸಂಪೂರ್ಣ ಸೋರಿಕೆಯಾಗುತ್ತಿರುವುದರಿಂದ ಮಳೆ ನೀರು ಒಳಹರಿದು ಬರುತ್ತಿದೆ. ಪ್ರಯಾಣಿಕರಿಗೆ ಸುರಕ್ಷಿತವಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಶಾಸಕರ ಅನುದಾನದ ಯೋಜನೆ ಮೂಲೆಗುಂಪು
ಪ್ರಯಾಣಿಕರ ಹಿತದೃಷ್ಠಿಯಿಂದ ಶಾಸಕ ಸುನೀಲ್ ಕುಮಾರ್ ಅವರು ಕಳೆದ ನಾಲ್ಕು ವರ್ಷಗಳ ಹಿಂದೆ (ಸಚಿವರಾಗುವ ಮುನ್ನ) ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಇಲ್ಲಿ ಶುರುಮಾಡಿದರು. ಕೇವಲ 2 ತಿಂಗಳು ಮಾತ್ರ ಕಾರ್ಯರಂಭಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ನಂತರದ ದಿನಗಳಲ್ಲಿ ಅದರ ಉಪಯೋಗ ಪ್ರಯಾಣಿಕರ ಪಾಲಿಗೆ ದೊರಕಿಲ್ಲ. ದುಸ್ಥಿತಿಗೆ ತಲುಪಿದ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ಥಿಯ ಜವಾಬ್ದಾರಿಯನ್ನು ನಿರ್ವಹಿಸಲು ಕಾರ್ಕಳ ಪುರಸಭೆ ವಿಫಲವಾದ ಪರಿಣಾಮವಾಗಿ ಲಕ್ಷಾಂತರ ಅನುದಾನ ವ್ಯರ್ಥವಾಗಿರುವುದು ಜಗಜಾಹೀರುಗೊಂಡಿದೆ.
ರೋರ್ಯಾಕ್ಟ್ ಕ್ಲಬ್ ನೀಡಿದ ಯೋಜನೆಗೆ ನೀರಿಲ್ಲ!
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿಯಲ್ಲಿ ಸ್ಥಾಪಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವು ಮೂಲೆ ಗುಂಪಿಗೆ ಸೇರಿದೆ. ಇತ್ತ ಪ್ರಯಾಣಿಕರ ಹಿತ ಕಾಪಾಡಿದ ಬಸ್ ಏಜೆಂಟರ ಬಳಗವು ರೋರ್ಯಾಕ್ಟ್ ಕ್ಲಬ್ಗೆ ಮೊರೆ ಹೋಗಿ ಶುದ್ಧ ಕುಡಿಯುವ ನೀರಿನ ಮತ್ತೊಂದು ಘಟಕ ಸ್ಥಾಪನೆಗೆ ಯಶಸ್ಸು ಕಂಡಿದೆ. ಆರಂಭದಲ್ಲಿ ಈ ಘಟಕಕ್ಕೆ ಪುರಸಭೆಯಿಂದ ಕುಡಿಯುವ ನೀರು ಪೊರೈಕೆ ಮಾಡಲಾಗುತ್ತಿತ್ತು. ಕಳೆದ ಕೆಲ ತಿಂಗಳುಗಳಿಂದ ಈ ಘಟಕಕ್ಕೆ ಸರಬರಾಜು ಆಗುವ ಪೈಪ್ ಲೈನ್ನ್ನು ಪಕ್ಕದ ಉದ್ಯಮವೊಂದಕ್ಕೆ ಜೋಡಣೆ ಮಾಡಿರುವುದರಿಂದ ಕಾರ್ಕಳ ರೋರ್ಯಾಕ್ಟ್ ಕ್ಲಬ್ ನೀಡಿದ ಶುದ್ಧ ಕುಡಿಯುವ ನೀರಿನ ಘಟಕ್ಕಕೆ ನೀರು ಸರಬರಾಜು ಆಗದೇ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಸ್ವಚ್ಚತೆಯಲ್ಲಿ ಬಲು ದೂರ....
ಕಳೆದ ಕೆಲ ವರ್ಷಗಳ ಹಿಂದೆ ಕಾರ್ಕಳ ಪುರಸಭೆಯು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಅದಕ್ಕೆ ಕಾರಣವಾಗಿರುವುದು ಸ್ವಚ್ಚತೆಯ ಕುರಿತು ಕಾರ್ಕಳ ಪುರಸಭೆ ಕೈಗೊಂಡಿದ್ದ ಕಾರ್ಯದಕ್ಷತೆಯೂ ಆಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಕಾರ್ಕಳ ಪುರಸಭೆಯ ವಿಸ್ತೃತ ಬಸ್ ನಿಲ್ದಾಣ ಪರಿಸರದತ್ತ ಕಣ್ಣು ಹಾಯಿಸಿದರೆ ಸ್ವಚ್ಚತೆಯ ಅರಿವು ಮೂಡುವುದು ಸಹಜ. ಎಲ್ಲೆಲ್ಲಿ ಬಿದ್ದುಕೊಂಡಿರುವ ತ್ಯಾಜ್ಯಗಳು ಕಂಡುಬರುತ್ತಿವೆ. ಬಸ್ ನಿಲ್ದಾಣದ ಸಂಕೀಣದಲ್ಲಿ ಇರುವ ವ್ಯಾಪಾರಿಗಳ ನಡುವಿನ ಪೈಪೋಟಿಯಿಂದಾಗಿ ಪಾಳು ಬಿದ್ದ ಶೀತಲೀಕರಣ ಘಟಕವನ್ನು ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಬಸ್ ನಿಲುಗಡೆ ಜಾಗದಲ್ಲಿ ಇಡಲಾಗಿದೆ.
ಅಪಾಯದ ಸ್ಥಿತಿಯಲ್ಲಿ ಹೈಮಾಸ್ಕ್ ದೀಪ
ವಿಸ್ತೃತ ಬಸ್ ನಿಲ್ದಾಣ ಪ್ರವೇಶ ದ್ವಾರದಲ್ಲಿ ಹೈಮಾಸ್ಕ್ ದೀಪ ಅಳವಡಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಿಂದ ಕಾರ್ಕಳಕ್ಕೆ ಬರುವ ದೈನಂದಿನ ಟೂರಿಸ್ಟ್ ಬಸ್ಸಿನ ಚಾಲಕನ ನಿರ್ಲಕ್ಷ್ಯದಿಂದ ಹೈಮಾಸ್ಕ್ ದೀಪದ ಕಟ್ಟೆ ಹಾನಿಗೊಳಗಾಗಿದೆ.