ಉಡುಪಿ, ಮೇ. 29 (DaijiworldNews/AA): ಉಡುಪಿಯ ಕರಾವಳಿ-ಮಲ್ಪೆ ರಸ್ತೆಯು ಪ್ರಯಾಣಿಕರಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ರಸ್ತೆಯಲ್ಲಿ ಉಂಟಾಗಿರುವ ದೊಡ್ಡ ಹೊಂಡಗಳು ಮತ್ತು ರಸ್ತೆ ಮೇಲ್ಮೈಯ ವ್ಯಾಪಕ ಹಾನಿಯಿಂದಾಗಿ ತೀವ್ರ ಅನಾನುಕೂಲತೆ ಸೃಷ್ಟಿಯಾಗಿದೆ. ಶಾಲೆಗಳು, ಕಡಲತೀರಗಳು, ಮೀನುಗಾರಿಕಾ ಬಂದರುಗಳು, ಕಾರ್ಖಾನೆಗಳು ಮತ್ತು ಕೈಗಾರಿಕಾ ಘಟಕಗಳನ್ನು ಸಂಪರ್ಕಿಸುವ ಈ ಪ್ರಮುಖ ರಸ್ತೆಯು ಈಗ ಬೃಹತ್ ಹೊಂಡಗಳಿಂದ ಕೂಡಿದ್ದು, ಆಗಾಗ್ಗೆ ಜಲಾವೃತವಾಗುತ್ತಿದೆ.






ರಸ್ತೆಯಲ್ಲಿನ ಹೊಂಡಗಳಲ್ಲಿ ನೀರು ತುಂಬಿ ದ್ವಿಚಕ್ರ ವಾಹನ ಸವಾರರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಅನೇಕರು ಬಿದ್ದು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಮಳೆಗಾಲ ಆರಂಭವಾದಂತೆ, ರಸ್ತೆಯ ಮೇಲೆ ಹರಿಯುವ ಚರಂಡಿ ನೀರು ಸಂಗ್ರಹವಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ರಸ್ತೆಯು ಬಹುತೇಕ ದುಸ್ತರವಾಗಿದೆ.
ಶಾಲೆಗಳ ಬಳಿ ಪರಿಸ್ಥಿತಿ ಚಿಂತಾಜನಕವಾಗಿದ್ದು, ನೀರು ನಿಂತಿರುವುದರಿಂದ ಶಾಲಾ ಆವರಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಮೇ 29 ರಂದು ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು, ಮಲ್ಪೆ ಮುಖ್ಯ ರಸ್ತೆಯ ಶೋಚನೀಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಗಂಭೀರ ಅಪಾಯಗಳನ್ನು ಒಡ್ಡುತ್ತಿದೆ.
ರಸ್ತೆಯ ಎರಡೂ ಬದಿಗಳು ಜಲಾವೃತವಾಗಿರುವುದರಿಂದ ಪಾದಚಾರಿಗಳಿಗೆ ಸುರಕ್ಷಿತ ಕಾಲುದಾರಿ ಇಲ್ಲದಂತಾಗಿದೆ. ನಿರಂತರ ಸಂಚಾರ ಮತ್ತು ಸರಿಯಾದ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಪಾದಚಾರಿಗಳು ನಡೆದಾಡಲು ಕಷ್ಟಪಡುವಂತಾಗಿದೆ.
ಪ್ರತಿದಿನ ಸಾವಿರಾರು ಭಾರೀ ಮತ್ತು ಲಘು ವಾಹನಗಳು ಹಾಗೂ ದ್ವಿಚಕ್ರ ವಾಹನಗಳು ಈ ಮಾರ್ಗವನ್ನು ಬಳಸುತ್ತವೆ. ಸದ್ಯ ದೊಡ್ಡ ಹೊಂಡಗಳನ್ನು ಹೊಂದಿರುವ ರಸ್ತೆಗಳ ಸಂಖ್ಯೆ; ಹಾನಿಯಾಗದ ರಸ್ತೆಗಳಿಗಿಂತಲೂ ಅಧಿಕವಾಗಿದೆ. ಮಲ್ಪೆಯಿಂದ ಕರಾವಳಿ ಬೈಪಾಸ್ಗೆ ಪ್ರಯಾಣಿಸುವುದು ಬಹಳ ಕಷ್ಟಕರವಾಗಿದೆ.
ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ರಸ್ತೆಯ ಸ್ಥಿತಿ ವೇಗವಾಗಿ ಹದಗೆಡುತ್ತಿರುವುದರಿಂದ, ತುರ್ತು ರಸ್ತೆ ದುರಸ್ತಿ ಮತ್ತು ದೀರ್ಘಾವಧಿಯ ಒಳಚರಂಡಿ ಪರಿಹಾರಕ್ಕಾಗಿ ಬೇಡಿಕೆ ಹೆಚ್ಚಾತ್ತಿದೆ.