ಉಡುಪಿ, ಮೇ. 30 (DaijiworldNews/AA): ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರಿರಾಮ್ ಶಂಕರ್ ಶುಕ್ರವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಎಸ್ಪಿ ಡಾ.ಅರುಣ್ ಕೆ. ಅವರು ಹರಿರಾಮ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.




ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, "ನಾನು ಈ ಹಿಂದೆ ಕುಂದಾಪುರದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದರಿಂದ, ನನಗೆ ಉಡುಪಿ ಜಿಲ್ಲೆಯ ಪರಿಚಯವಿದೆ. ನಾನು ಹಾಸನ ಮತ್ತು ಮಂಗಳೂರಿನಲ್ಲಿಯೂ ಸೇವೆ ಸಲ್ಲಿಸಿದ್ದು, ಇದು ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯಲ್ಲಿ ನನಗೆ ವಿಶಾಲ ಅನುಭವವನ್ನು ನೀಡುತ್ತದೆ" ಎಂದು ಹೇಳಿದರು.
"ಇತ್ತೀಚೆಗೆ ನಡೆಯುತ್ತಿರುವ ಯಾವುದೇ ರೀತಿಯ ಘರ್ಷಣೆಗಳು ಅಥವಾ ಗಲಭೆಗಳಲ್ಲಿ ಜಿಲ್ಲೆಯ ಜನತೆ ಭಾಗಿಯಾಗದೆ ಶಾಂತಿ ಕಾಪಾಡಬೇಕು. ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು. ಯಾವುದೇ ತುರ್ತು ಅಥವಾ ಪ್ರಮುಖ ಮಾಹಿತಿ ಇದ್ದರೆ, ಸಾರ್ವಜನಿಕರು ನನ್ನನ್ನು ನೇರವಾಗಿ ಸಂಪರ್ಕಿಸಬಹುದು ಅಥವಾ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು. ನನ್ನ ಸಂಪರ್ಕ ಸಂಖ್ಯೆ ಸಾರ್ವಜನಿಕವಾಗಿ ಲಭ್ಯವಿದೆ" ಎಂದು ತಿಳಿಸಿದರು.
"ಕೋಮು ಉದ್ವಿಗ್ನತೆ ಅಥವಾ ಸಂಬಂಧಿತ ಸಮಸ್ಯೆಗಳನ್ನು ಸಾರ್ವಜನಿಕರು ತಕ್ಷಣವೇ ಪೊಲೀಸ್ ಇಲಾಖೆಗೆ ವರದಿ ಮಾಡಬೇಕು. ಮಾಜಿ ಎಸ್ಪಿ ಅರುಣ್ ಕೆ ಅವರು ದಣಿವರಿಯದೆ, ಶಿಸ್ತುಬದ್ಧವಾಗಿ, ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದಾರೆ. ನಾನು ಅದೇ ಪ್ರಯತ್ನವನ್ನು ಮುಂದುವರಿಸುವ ಗುರಿ ಹೊಂದಿದ್ದೇನೆ. ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲ. ರೌಡಿಸಂ ಮತ್ತು ಗೂಂಡಾಗಿರಿ ಸಾಮಾನ್ಯ ನಾಗರಿಕರ ಶಾಂತಿಗೆ ಭಂಗ ತರಬಾರದು. ಎಸ್ಪಿ ಅರುಣ್ ಕೆ ಅವರ ನಾಯಕತ್ವದಲ್ಲಿ ಇಲಾಖೆಯಲ್ಲಿ ರೂಢಿಸಲಾದ ಶಿಸ್ತು ಮತ್ತು ಸಂಘಟನೆಯನ್ನು ಅದೇ ರೀತಿ ನಿರ್ವಹಿಸಲಾಗುವುದು" ಎಂದರು.
"ಎಎಸ್ಪಿ ಆಗಿ, ನಾನು ರಾತ್ರಿ ಗಸ್ತು ತಿರುಗಿದ್ದೇನೆ ಮತ್ತು ಹಲವಾರು ದಾಳಿಗಳನ್ನು ನಡೆಸಿದ್ದೇನೆ. ಈ ಹಿಂದಿನ ಅನುಭವಗಳು ಈಗ ಎಸ್ಪಿ ಆಗಿ ನನ್ನ ಹೊಸ ಪಾತ್ರದಲ್ಲಿ ನನಗೆ ಸಹಾಯ ಮಾಡುತ್ತವೆ. ನಾನು ಎಲ್ಲರಿಗೂ ಲಭ್ಯವಿರುತ್ತೇನೆ. ನಾವು ಉಡುಪಿಯ ಜನರನ್ನು ನಂಬುತ್ತೇವೆ ಹಾಗೂ ಕಾನೂನು ಜಾರಿಗೊಳಿಸುವಲ್ಲಿ ಅವರ ನಂಬಿಕೆ ಬಲವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ" ಎಂದು ಹೇಳಿದರು.
ಡಿಜಿಟಲ್ ದುರುಪಯೋಗ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಆನ್ಲೈನ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಇಬ್ಬರು ಅಧಿಕಾರಿಗಳಿದ್ದಾರೆ. ನಾವು ಸೂಕ್ಷ್ಮ ಅಥವಾ ಪ್ರಚೋದನಕಾರಿ ವಿಚಾರಗಳನ್ನು ಪೋಸ್ಟ್ ಮಾಡುವವರನ್ನು ಮಾತ್ರವಲ್ಲದೆ, ಅಂತಹ ಪೋಸ್ಟ್ಗಳನ್ನು ಹಂಚಿಕೊಳ್ಳುವವರನ್ನು ಅಥವಾ ಅದರಲ್ಲಿ ತೊಡಗಿಸಿಕೊಳ್ಳುವವರನ್ನೂ ಸಹ ಟ್ರ್ಯಾಕ್ ಮಾಡುತ್ತಿದ್ದೇವೆ. ದ್ವೇಷವನ್ನು ಹರಡಲು ಅಥವಾ ಉದ್ವಿಗ್ನತೆಯನ್ನು ಪ್ರಚೋದಿಸಲು ಬಳಸುವ ನಕಲಿ ಖಾತೆಗಳನ್ನು ಸಹ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು" ಎಂದು ನುಡಿದರು.
ಸೈಬರ್ ವಂಚನೆಯ ಹೆಚ್ಚುತ್ತಿರುವ ಕುರಿತು ಮಾತನಾಡಿದ ಅವರು, "ಉಡುಪಿ ನಿವಾಸಿಗಳು ಆನ್ಲೈನ್ ವಂಚನೆಯಿಂದ ದೊಡ್ಡ ಮೊತ್ತವನ್ನು ಕಳೆದುಕೊಳ್ಳುತ್ತಿದ್ದಾರೆ. ನಾವು ಸಕ್ರಿಯವಾಗಿ ಜಾಗೃತಿ ಮೂಡಿಸುತ್ತಿದ್ದೇವೆ. ಆನ್ಲೈನ್ ವಂಚನೆಯ ಬಲೆಗಳಿಗೆ ಬೀಳದಂತೆ ಜನರಿಗೆ ಸಲಹೆ ನೀಡುತ್ತಿದ್ದೇವೆ. ನಮ್ಮ ಸೆನ್ ಪೊಲೀಸ್ ಠಾಣೆ ಯಾವಾಗಲೂ ಎಚ್ಚರಿಕೆಯಿಂದಿರುತ್ತದೆ. ಕಳುವಾದ ಮೊಬೈಲ್ ಫೋನ್ಗಳ 35% ಅನ್ನು ನಾವು ಈಗಾಗಲೇ ವಶಪಡಿಸಿಕೊಂಡಿದ್ದೇವೆ" ಎಂದು ಮಾಹಿತಿ ನೀಡಿದರು.
"ಅನೇಕ ಅಪರಾಧಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ನಾಶಪಡಿಸುತ್ತಾರೆ. ಅದಕ್ಕಾಗಿಯೇ ಕೇವಲ ಜಾಗೃತಿ ಸಾಕಾಗುವುದಿಲ್ಲ. ಪ್ರಮುಖ ಪ್ರದೇಶಗಳಲ್ಲಿ ಖಾಸಗಿ-ಸಾರ್ವಜನಿಕ ಭದ್ರತಾ ಗಸ್ತುಗಳನ್ನು ನಿಯೋಜಿಸುವ ಕುರಿತು ನಾವು ಚಿಂತನೆ ನಡೆಸುತ್ತಿದ್ದೇವೆ. ನಾವು ಸಾರ್ವಜನಿಕರನ್ನು ಭೇಟಿ ಮಾಡುವ ಮೂಲಕ ನಾಗರಿಕರು ಪೊಲೀಸ್ ಠಾಣೆಗೆ ಬರುವ ಅಗತ್ಯವನ್ನು ಕಡಿಮೆ ಮಾಡುವ ಗುರಿ ಹೊಂದಿದ್ದೇವೆ. ನಮ್ಮ ಉಪಸ್ಥಿತಿಯು ಅಪರಾಧ ಕೃತ್ಯಗಳನ್ನು ಯೋಜಿಸುವವರಲ್ಲಿ ಭಯವನ್ನು ಹುಟ್ಟಿಸಬೇಕು" ಎಂದರು.
ಜಿಲ್ಲೆಯಲ್ಲಿನ ಸಂಚಾರ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, "ಸಂಚಾರವನ್ನು ಆಳವಾಗಿ ಅಧ್ಯಯನ ಮಾಡಿದ ನಮ್ಮ ಡಿಐಜಿ ಮತ್ತು ಐಜಿ ಅವರ ಬೆಂಬಲದೊಂದಿಗೆ, ನಾವು ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಪರಿಚಯಿಸಲು ಯೋಜಿಸಿದ್ದೇವೆ. ಇದು ಸಿಬ್ಬಂದಿ ಕೊರತೆಯನ್ನು ನಿರ್ವಹಿಸಲು ಮತ್ತು ದೈನಂದಿನ ಸಂಚಾರ ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ವಿಶ್ಲೇಷಿಸಲು ನಮಗೆ ಸಹಾಯ ಮಾಡುತ್ತದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.